ಬಳ್ಳಾರಿ, ಮೇ.11.: ರಾಜ್ಯದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಈ ಕಾರ್ಯಕ್ರಮದ ಮೂಲಕ ಆಗುತ್ತಿರುವುದು ಸಂತಸದ ಸಂಗತಿ.
ಯಾವುದೇ ಕಲಾ ಪ್ರಕಾರ ಇರಲಿ. ಅದರಲ್ಲಿ ಸಂಪೂರ್ಣ ಮನಸ್ಸು ತೊಡಗಿಸಿಕೊಂಡು ನೈಪುಣ್ಯತೆಯನ್ನು ಸಾಧಿಸಬೇಕಾಗುತ್ತದೆ ಎಂದು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ನುಗಡೋಣಿ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ರಾಯಚೂರಿನ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿಂದ ಗಡಿನಾಡು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ,
ಕಲೆ ಎಂಬುದು ಫ್ಯಾಶನ್ ಆಗದೆ, ಕಲಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು. ಎಷ್ಟು ಬರೆದೆ ಎಂಬುದು ಮುಖ್ಯ ಅಲ್ಲ. ಅವು ಎಷ್ಟು ಕಾಲ ಸಮಾಜಕ್ಕೆ ಪ್ರಸ್ತುತ ಎಂಬುದನ್ನು ಅರಿತು ಲೋಕದ ಅನಿಷ್ಟತೆಯನ್ನು ಪ್ರಶ್ನಿಸುವಂತಿರಬೇಕು. ಅಂತಹುದನ್ನು ನಾವು ಶಿವ ಶರಣ ವಚನಗಳಲ್ಲಿ ಕಾಣುತ್ತೇವೆ ಎಂದರು.
ಸಮಾರಂಭಗಳಲ್ಲಿ ಸನ್ಮಾನ ಮಾಡುವುದು, ಮಾಡಿಸಿಕೊಳ್ಳುವುದೇ ಮುಖ್ಯ ಆಗದೆ. ಸಮಾಜದಲ್ಲಿ ಸನ್ಮಾನ ಮಾಡಿಸಿಕೊಂಡವರು ಹತ್ತು ವರ್ಷಗಳ ನಂತರ ಹೇಗೆಗುರುತಿಸಿಕೊಳ್ಳುವಂತೆ ಆಗಿದ್ದಾರೆ ಎನ್ನುವಂತಾಗಬೇಕು.
ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗಳು ಇಂತಹ ಸಂಸ್ಥೆ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸಿದ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸರ್ಕಾರ, ಜನಪ್ರತಿನಿಧಿಗಳು, ಶಿಕ್ಷಕರಿಂದ ಮಾತ್ರ ಸಾಧ್ಯ ಇಲ್ಲ. ಎಲ್ಲರೂ ನಾವು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ದುಡಿಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಮಾತನಾಡಿ, ಬಳ್ಳಾರಿಯಲ್ಲಿ ಬೆಳಕು ಸಂಸ್ಥೆಯಿಂದ ಇಂತಹ ಗಡಿ ಸಮ್ಮೇಳನ ನಡೆಸಿದ್ದು ಸ್ವಾಗತಾರ್ಹ, ಗಡಿ ಎಂಬುದು ಭೌಗೋಳಿಕವಾಗಿ ಇರುತ್ತೆ, ಆದರೆ ಕಲೆ, ಸಾಹಿತ್ಯ ಸಂಸ್ಕೃತಿಗೆ ಗಡಿ ಇರಲ್ಲ ಸರ್ವತ್ರ ಮಾನ್ಯವಾದುದು ಎಂದರು.
ಸಮ್ಮೇಳನದ ಅಧ್ಯಕ್ಷರಾಗಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಇದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಸರ್ಕಾರದ ಅನುದಾನ ಪಡೆಯದೇ ಈ ಬೆಳಕು ಸಂಸ್ಥೆ ಕಲಾವಿದರ ಪ್ರೋತ್ಸಾಹಕ್ಕಾಗಿ ದಾನಿಗಳ ನೆರವಿನಿಂದಲೇ ನಡೆಸುತ್ತ ಬಂದಿರುವುದು ಹೆಮ್ಮೆಯ ಸಂಗತಿ. ನಮ್ಮಕಾರ್ಯಕ್ರಮಗಳ ಮೂಲಕ ಅನೇಕ ಕಲಾವಿದರನ್ನು ಬೆಳಕಿಗೆ ತಂದಿದೆ,ಆನಂತರ ಅಂತಹವರನ್ನು ಸಾಹಿತ್ಯ ಪರಿಷತ್, ಸರ್ಕಾರ ಗುರುತಿಸಿಬೇಕಾದ ಅಗತ್ಯವಿದೆ ಎಂದರು.
ಈ ವೇಳೆ ಬೆಳಕು ಸಂಸ್ಥೆಯ ಗೌರವ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಿರೇಮಠ ಅವರು ಗೀತಾ ವಿ.ಆರ್.ಅವರ "ಗೀತಾಮೃತ" ಕೃತಿಯನ್ನು ಲೋಕಾರ್ಪಣೆ ಮಾಡಿದರು.
ನಾಡಿನ ಅನೇಕ ಗಣ್ಯರಿಗೆ ಸನ್ಮಾನ, ಪ್ರಶಸ್ತ ಪ್ರದಾನ, ಕವಿಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ , ಜೋಳದರಾಶಿ ತಿಮ್ಮಪ್ಪ, ಡಾ.ಮಯನಿಯಪ್ಪ, ಸಿದ್ದರಾಮ ಕಲ್ಮಠ, ಬಸವರಾಜ್ ಬಿಸಲಹಳ್ಳಿ, ಶಿವಮೂರ್ತಿ ಹಿರೇಮಠ, ಎನ್.ಬಸವರಾಜ್, ಎನ್.ವೀರಭದ್ರಗೌಡ,
ಡಾ.ವಿಷ್ಣು ಎಂ.ಶಿಂದೆ, ಉಮ್ಮತ್ತೂರು ಇಂದು ಶೇಖರ್, ಡಾ.ಎಸ್.ಎಸ್.ಪಾಟೀಲ್ ಹುಬ್ಬಳ್ಳಿ ಮೊದಲಾದವರು ಇದ್ದರು.