*ಬಳ್ಳಾರಿ:17:ವಿಷಮುಕ್ತ ಹಾಗೂ ಸಾವಯವ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ನಗರದಲ್ಲಿ ಸಾವಯವ ಸಂತೆ ಆರಂಭಿಸಲಾಗುತ್ತಿದೆ.
ಆಗಸ್ಟ್ 26ರಿಂದ ಪ್ರತಿ ಬುಧವಾರ ನಗರದ ಗಾಂಧಿ ಭವನದಲ್ಲಿ ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ಸಂತೆ ನಡೆಯಲಿದೆ ಎಂದು ಸಾವಯವ ಕೃಷಿಕ ಜಯಚಂದ್ರ ಶರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿಗೆ ಉತ್ತೇಜನ ನೀಡಲು ಈ ಪ್ರಯತ್ನ ಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಚಾಮರಾಜನಗರದಲ್ಲಿ ಆರಂಭವಾದ ಈ ಯೋಜನೆಯನ್ನು ಮೊದಲು ಬೆಂಗಳೂರಿನಲ್ಲಿ ರಾಜ್ಯಮಟ್ಟದಲ್ಲಿ ನಡೆಸಲಾಗಿತ್ತು. ಇದೀಗ ಜಿಲ್ಲಾಮಟ್ಟದಲ್ಲಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸಾವಯವ ಸಂತೆ ಆರಂಭವಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಇರಪ್ಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಿಷಮುಕ್ತ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತರು ಬೆಳೆದ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಉತ್ಪನ್ನಗಳ ಗುಣಮಟ್ಟದ ಜವಾಬ್ದಾರಿಯನ್ನು ರೈತ ಸಂಘ ವಹಿಸಲಿದೆ ಎಂದು ಹೇಳಿದರು.
ಸಂತೆಯಲ್ಲಿ 280ಕ್ಕೂ ಹೆಚ್ಚು ವಿವಿಧ ಸಾವಯವ ಉತ್ಪನ್ನಗಳು ಲಭ್ಯವಾಗಲಿವೆ. ವಿಷಮುಕ್ತ ಆಹಾರ ಪದ್ಧತಿಯ ಕುರಿತು ಜಾಗೃತಿ ಮೂಡಿಸುವುದು ಮತ್ತು ಪ್ರತಿ ಮನೆಯ ಅಡುಗೆ ಮನೆಯಲ್ಲಿ ಸಾವಯವ ಉತ್ಪನ್ನಗಳ ಬಳಕೆ ಹೆಚ್ಚಿಸುವುದು ಸಂತೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕದಿಂದ ರೈತರಿಗೆ ನ್ಯಾಯಯುತ ಬೆಲೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಆಹಾರ ದೊರೆಯಲಿದೆ. “ನಿಮ್ಮ ಆರೋಗ್ಯದ ಭದ್ರತೆಯನ್ನು ನಾವು ಕಾಪಾಡುತ್ತೇವೆ, ನಮ್ಮ ಆರ್ಥಿಕತೆಯನ್ನು ನೀವು ಕಾಪಾಡಿ” ಎಂದು ಗ್ರಾಹಕರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಗೈಕ್ವಾಡ್, ವಿವೇಕಾನಂದ, ಹುಲಿಕೆರೆ ವಿಶ್ವೇಶ್ವರ ಸಜ್ಜನ್, ಗೋವಿಂದರಾಜುಲು, ಈಶ್ವರ್ ರೆಡ್ಡಿ, ಶಿಲ್ಪಾ, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.