ಹುಬ್ಬಳ್ಳಿ:
ಚಿನ್ನ ದರ ದಿನದಿಂದಕ್ಕೆ ಏರುತ್ತಲೇ ಇದೆ. ಈ ಮಧ್ಯೆ ಒಂದು ವರ್ಷದವರೆಗೆ ಬಂಗಾರ ಖರೀದಿಸದಂತೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಇದು ಹಲವು ಚರ್ಚೆ ಮತ್ತು ವಿಶ್ಲೇಷಣೆಗಳನ್ನು ಹುಟ್ಟು ಹಾಕಿದೆ. ಆದರೆ, ಈ ಬಗ್ಗೆ ಅಕ್ಕಸಾಲಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿನ್ನಾಭರಣ ವ್ಯಾಪಾರಿಗಳಿಗೆ ಸಮಸ್ಯೆ ಇಲ್ಲ:
ಈ ಕುರಿತಂತೆ ಹುಬ್ಬಳ್ಳಿ ಸರಾಫ್ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ ಅವರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಾರತೀಯರಿಗೆ ಬಂಗಾರದ ಮೇಲೆ ಮೋಹ ಹೆಚ್ಚು. ದೇಶದಲ್ಲಿ ಚಿನ್ನ ಉತ್ಪಾದನೆ ಆಗುವುದಿಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಬಂಗಾರ ಖರೀದಿಸದಂತೆ ಹೇಳಿದ್ದು, ಸರಿಯಾಗಿದೆ. ಇದರಿಂದ ಬಂಗಾರದ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ಲಕ್ಷಕ್ಕೆ ಚಿನ್ನದ ದರ ಏರಿಕೆ ಆದಾಗಿನಿಂದಲೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ದೀಪಾವಳಿ, ಯುಗಾದಿ, ಅಕ್ಷಯ ತೃತೀಯ ದಿನವೂ ಕೂಡ ಜನ ಅಷ್ಟಾಗಿ ಬಂಗಾರ ಖರೀದಿ ಮಾಡಲಿಲ್ಲ ಎಂದರು.
ಶೇ25ರಷ್ಟು ಜನ ಖರೀದಿಸಿದರೆ ಸಾಕು:
ಪ್ರಧಾನಿ ಅವರು ಹೇಳಿದ್ದಾರೆ ಅಂತ ಜನ ಖರೀದಿ ಮಾಡುವುದು ಬಿಡುವುದಿಲ್ಲ. ಶೇ.25 ರಷ್ಟು ಜನ ಬಂಗಾರ ಖರೀದಿ ಮಾಡಿದ್ರೂ ಸಾಕು ಬಂಗಾರ ಆಭರಣ ಮಳಿಗೆಗಳನ್ನು ನಡೆಸಬಹುದು. ಇದರ ಎಫೆಕ್ಟ್ ಅಕ್ಕಸಾಲಿಗರ ಮೇಲೆ ಬೀರಬಹುದು. ಆದರೆ ಅವರಲ್ಲೂ ಕೂಡ ಬಂಗಾಳ ಮೂಲದ ಆಭರಣ ತಯಾರಿಕರು ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಅವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ 450ಕ್ಕೂ ಹೆಚ್ಚು ಚಿನ್ನದ ಅಂಗಡಿಗಳು:
ಹುಬ್ಬಳ್ಳಿಯಲ್ಲಿ 450 ಕ್ಕೂ ಹೆಚ್ಚು ಬಂಗಾರದ ಅಂಗಡಿಗಳಿವೆ. ಸರಫ ಗಟ್ಟಿಯಲ್ಲಿ 190 ಜನ ಸದಸ್ಯರಿದ್ದಾರೆ. 1 ಲಕ್ಷಕ್ಕಿಂತ ಕಡಿಮೆ ಬೆಲೆ ಇದ್ದಾಗ ಬೇಡಿಕೆ ಜಾಸ್ತಿ ಇತ್ತು. ಹೆಚ್ಚು ಮಾರಾಟವಾಗುತ್ತಿತ್ತು. ಆದರೆ ಈಗ ಬಹಳ ಕಡಿಮೆಯಾಗಿದೆ ಎಂದರು.
ಸರಾಫ ಸಂಘದ ಸಹ ಕಾರ್ಯದರ್ಶಿ ವೀರಭದ್ರಪ್ಪ ಹೂಲಿ ಮಾತನಾಡಿ, ಬಂಗಾರ ಖರೀದಿ ಕಡಿಮೆಯಾದರೆ ಚಿನ್ನದ ಅಂಗಡಿಕಾರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮದುವೆ ಸಭೆ ಸಮಾರಂಭಗಳಿಗೆ ಬಂಗಾರ ತೆಗೆದುಕೊಳ್ಳುವವರು ತಗೆದುಕೊಳ್ಳುತ್ತಾರೆ. ಆದರೆ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡಬಹುದು. ದೇಶದ ಅಭಿವೃದ್ಧಿಗಾಗಿ ನಾವು ಕೂಡ ಅನುಸರಿಸಿಕೊಂಡು ಹೋಗಬೇಕಾಗುತ್ತದೆ. ಸ್ವಲ್ಪ ಪ್ರಮಾಣ ಸಮಸ್ಯೆ ಆಗುತ್ತದೆ. ಆದರೆ ದೇಶ ಮೊದಲು ಎಂದು ತಿಳಿಸಿದರು.
ಅಕ್ಕಸಾಲಿಗರಲ್ಲಿ ಆತಂಕ:
ಅಕ್ಕಸಾಲಿಗರಾದ ಶಂಕರ ಪವಾರ ಅವರು ಮಾತನಾಡಿ, ಮೋದಿಯವರು ಬಂಗಾರ ತೆಗೆದುಕೊಳ್ಳಬೇಡಿ ಅಂದ್ರೆ ನಮ್ಮಂತ ಸಣ್ಣಪುಟ್ಟ ಬಂಗಾರದ ಕುಸುರಿ ಕೆಲಸ ಮಾಡುವವರು ಏನು ಮಾಡಬೇಕು? ನಮಗೆ ಇದನ್ನು ಬಿಟ್ಟರೆ ಬೇರೆ ಕೆಲಸ ಬರುವುದಿಲ್ಲ. ಮನೆಯಲ್ಲಿ ಮದುವೆ, ಸಭೆ ಸಮಾರಂಭಗಳಿಗೆ ಬಂಗಾರ ಬೇಕು. ಮದುವೆಯಲ್ಲಿ ಬಂಗಾರ ಕೊಡುವುದಾಗಿ ಹೇಳಿರುತ್ತಾರೆ. ಬಂಗಾರ ಕೊಡದಿದ್ದರೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಬಂಗಾರ ಬಡವರಿಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಆಸ್ಪತ್ರೆ, ಶಾಲೆ ಹಣ ಕಟ್ಟಬೇಕಾದರೆ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದುಕೊಳ್ಳಬಹುದು. ಬಂಗಾರವನ್ನು ಜನಸಾಮಾನ್ಯರು ಖರೀದಿ ಮಾಡದಿದ್ರೆ ಅಕ್ಕಸಾಲಿಗ ವೃತ್ತಿ ನಂಬಿದ ನಮಗೆ ಗ್ರಾಹಕರು ಇಲ್ಲದಂತಾಗುತ್ತದೆ. ಅಂಗಡಿ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
