ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ನಿನ್ನೆ ಗುರುವಾರ ಪೊಲೀಸರು ಸಂತ್ರಸ್ತೆಯನ್ನು ಕರೆದೊಯ್ದು ಕೃತ್ಯ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಮುತ್ಯಾಲನಗರದ ಗೋಡೌನ್, ನೆಲಮಂಗಲ ಬಳಿ ಮಹಜರು ಮಾಡಿ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೋವಿಡ್ ಸಮಯದಲ್ಲಿ ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಮುನಿರತ್ನ ಕರೆ ಮಾಡಿದ್ದರು. ಅದರಂತೆ ಭೇಟಿಯಾದ ಸಂತ್ರಸ್ತೆ ಹಾಗೂ ಮುನಿರತ್ನ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್ ಮೂಲಕ ಮಾತನಾಡುತ್ತಿದ್ದರು. ಹೀಗೊಂದು ದಿನ ನಗ್ನವಾಗಿ ವಿಡಿಯೊ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂತ್ರಸ್ತೆ ನಿರಾಕರಿಸಿದ್ದರಂತೆ. ಇದಾದ ಬಳಿಕ ಸಂತ್ರಸ್ತೆಯನ್ನು ಗೋಡೌನ್ಗೆ ಕರೆಸಿಕೊಂಡು ನಿನ್ನ ನೋಡಿದರೆ ಮೈ ಜುಮ್ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾಗಿದ್ದರಂತೆ.
ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕ, ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ , ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರಂತೆ. ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನನ್ನು ಬಳಸಿಕೊಂಡರು ಎಂದು ಸಂತ್ರಸ್ತೆ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.