ಕೊಡಗು:
ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಕಂಜನ್ ಆನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಹೆಸರಿನ ಸಾಕಾನೆ ಇಂದು ಮೃತಪಟ್ಟಿದೆ.
ದುಬಾರೆಯ ಕಾವೇರಿ ನದಿಯಲ್ಲಿ ಸೋಮವಾರ ಆನೆಗಳಿಗೆ ಸ್ನಾನ ಮಾಡಿಸುವಾಗ ಕಂಜನ್ ಆನೆಯು ಮಾರ್ತಾಂಡ ಆನೆಗೆ ತಿವಿದಿತ್ತು. ಪರಿಣಾಮ 34 ವರ್ಷದ ಮಾರ್ತಾಂಡ ಗಂಭೀರವಾಗಿ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಾರ್ತಾಂಡ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಬೆನ್ನಲ್ಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
DCF ಹೇಳಿದೇನು ? ನಿನ್ನೆ ಎರಡು ಆನೆಗಳ ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗಿದೆ ಆನೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದೆ ಎಂದು ಡಿಸಿಎಫ್ ಅಭಿಷೇಕ್ ದೂರವಾಣಿ ಮೂಲಕ ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದುಬಾರೆ ಸಾಕಾನೆ ಶಿಬಿರವನ್ನು ಎರಡು ದಿನಗಳ ಕಾಲ ಬಂದ್ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.
ಸಾಕಾನೆ ಕಾದಾಟದಲ್ಲಿ ಪ್ರವಾಸಿ ಮಹಿಳೆ ಸಾವು:
ಸೋಮವಾರಪೇಟೆ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ಎಂದಿನಂತೆ ನೀರು ಕುಡಿಸಲು ಹಾಗೂ ಅವುಗಳಿಗೆ ಸ್ನಾನ ಮಾಡಿಸಲು ಮಾವುತರು ಸಾಕಾನೆಗಳನ್ನು ಸೋಮವಾರ ಕೆರೆ ತಂದಿದ್ದರು. ಸಾಕಾನೆಗಳಾದ ಕಂಚನ್ ಮತ್ತು ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿವೆ. ಈ ವೇಳೆ, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ ದಾಳಿ ಮಾಡಿತ್ತು. ಪರಿಣಾಮ ಮಾರ್ತಾಂಡ ಆನೆ ಆಯ ತಪ್ಪಿ ಕೆಳಗೆ ಬಿದ್ದಿತ್ತು. ಈ ವೇಳೆ ಅಲ್ಲೇ ಇದ್ದ ಪ್ರವಾಸಿ ಮಹಿಳೆಯು ಮಾರ್ತಾಂಡ ಆನೆಯ ಕೆಳಗೆ ಸಿಲುಕಿದ್ದರು. ಪರಿಣಾಮ ತಮಿಳುನಾಡಿನ ಪ್ರವಾಸಿ ಮಹಿಳೆ ಜಾನ್ನಿಸಿ (33) ಮೃತಪಟ್ಟಿದ್ದಾರೆ. ಆನೆಯಡಿ ಸಿಲುಕಿದ್ದ ಮಹಿಳೆಯನ್ನು ಆಕೆಯ ಪತಿ ರಕ್ಷಿಸಲು ಯತ್ನಿಸಿದರೂ ಸಹ ಸಾಧ್ಯವಾಗಿರಲಿಲ್ಲ. ಮೃತರು, ಪತಿ ಹಾಗೂ ಮಗಳ ಜೊತೆ ಎರಡು ದಿನಗಳ ಕೊಡಗು ಪ್ರವಾಸಕ್ಕೆ ಬಂದಿದ್ದರು.
ಕಂಜನ್ ಆನೆಯು ಹಲವು ಬಾರಿ ಮಾರ್ತಾಂಡ ಆನೆಗೆ ತಿವಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಾವುತರು ಹರಸಾಹಸಪಟ್ಟರೂ ಕಂಜನ್ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಂಜನ್ ದಾಳಿಯಿಂದ ಮಾರ್ತಾಂಡ ಆನೆ ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣವೇ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೂ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಸಾಕಾನೆಗಳ ನಡುವಿನ ಕಾದಾಟದ ವೇಳೆ ಆನೆಯ ಕೆಳಗೆ ಸಿಲುಕಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.) ರೂಪಿಸುವಂತೆ ಆದೇಶಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆಗಾಗಿ ಎಸ್ಓಪಿ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಖಂಡ್ರೆ, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.
