ವಿಜಯನಗರ (ಹೊಸಪೇಟೆ,) ಜೂನ್ ೨೫:ಗಂಗಾ ಪರಮೇಶ್ವರಿ ದೇವಿಯ ಜಯಂತಿ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಬುಧವಾರ ಗಂಗಾ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು. ಗಂಗಾ ಮತ ಸಮಾಜದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಮಾಜದ ನೂರಾರು ಮಹಿಳೆಯರು, ಯುವಕರು, ಹಿರಿಯರು ಹಾಗೂ ಗಣ್ಯರು ಉತ್ಸಾಹದಿಂದ ಭಾಗವಹಿಸಿ ಧಾರ್ಮಿಕ ಆಚರಣೆಗೆ ಮೆರುಗು ತಂದರು.
ಗಂಗಾ ಜಯಂತಿ ಪ್ರಯುಕ್ತ ನಗರದ ಸಣ್ಣಕ್ಕಿ ವೀರಭದ್ರ ದೇವಸ್ಥಾನದಿಂದ ಗಂಗಾ ಪರಮೇಶ್ವರಿಯ ಭಾವಚಿತ್ರವನ್ನು ಅಲಂಕೃತ ತೆರದ ವಾಹನದಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನೂರಾರು ಮಹಿಳೆಯರು ತಲೆಯ ಮೇಲೆ ಪೂರ್ಣಕುಂಭ ಹೊತ್ತು ಸಾಂಪ್ರದಾಯಿಕ ಉಡುಗೆಯಲ್ಲಿ ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಮೆರವಣಿಗೆಯು ಸಣ್ಣ ಕ್ಕಿ ವೀರಭದ್ರ ದೇವಸ್ಥಾನದಿಂದ ಆರಂಭವಾಗಿ ವಾಲ್ಮೀಕಿ ವೃತ್ತ, ಚಿತ್ರಕೇರಿ , ಮೆನ್ ಬಜಾರ್, ಪಾದಗಟ್ಟಿ ಆಂಜನೇಯಸ್ವಾಮಿ ದೇವಸ್ಥಾನ, ಮಸೀದಿ ರಸ್ತೆ, ಮಾರ್ಕೆಟ್ ಹಾಗೂ ಮದಕರಿ ನಾಯಕ ವೃತ್ತದ ಮೂಲಕ ಸಾಗಿಬಂದು ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.
ಮೆರವಣಿಗೆಯುದ್ದಕ್ಕೂ ಭಕ್ತರು ಭಜನೆ, ಜಯಘೋಷ ಹಾಗೂ ಧಾರ್ಮಿಕ ಘೋಷಣೆಗಳ ಮೂಲಕ ಭಕ್ತಿಭಾವ ಮೆರೆದರು. ತಾಷಾ, ಡೊಳ್ಳು ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ಮೂಲಕ ನಗರದಾದ್ಯಂತ ಮೊಳಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಗಂಗಾ ಮತ ಸಮಾಜದ ವತಿಯಿಂದ ಒಂದು ಜೋಡಿಗೆ ಉಚಿತವಾಗಿ ವಿವಾಹ ನೆರವೇರಿಸಲಾಯಿತು. ನೂತನ ವಧು-ವರರಿಗೆ ಸಮಾಜದ ಮುಖಂಡರು ಆಶೀರ್ವದಿಸಿ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು ಸಮಾಜದ ಏಕತೆ, ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿ ಗಂಗಾ ಜಯಂತಿ ಆಚರಣೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
