ನವದೆಹಲಿ, ಮೇ 15: ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಇಂಧನ ದರ ಏರಿಕೆ ಬಗ್ಗೆ ತೈಲ ಕಂಪನಿಗಳು ಘೋಷಿಸಿದ್ದು, ತಕ್ಷಣದಿಂದಲೇ ಜಾರಿಗೆ ತಂದಿವೆ. ಜಾಗತಿಕ ಬೆಲೆ ಏರಿಕೆಯ ಒಂದು ಭಾಗವನ್ನು ತೈಲ ಕಂಪನಿಗಳು ಈಗ ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸಿವೆ. ಸದ್ಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್ಗೆ 97.77 ರೂ.ಗಳಿಂದ 94.77 ರೂ.ಗಳಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 87.67 ರೂ.ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿದೆ. ಆಯಾ ರಾಜ್ಯಗಳಲ್ಲಿಯ ಸ್ಥಳೀಯ ತೆರಿಗೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಲ್ಲಿ ತುಸು ವ್ಯತ್ಯಾಸ ಕಾಣಬಹುದು.
ಭಾರತದಲ್ಲೂ ಪೆಟ್ರೋಲ್, ಡೀಸೆಲ್ನೊಂದಿಗೆ ಸಿಎನ್ಜಿ ದರವೂ ಹೆಚ್ಚಳ ಕಂಡಿದೆ. ಸಿಎನ್ಜಿ ದರವನ್ನು ಕೆಜಿಗೆ ರೂ.2ರಷ್ಟು ಹೆಚ್ಚಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ದರ ಲೀಟರ್ಗೆ 3.27 ರೂಪಾಯಿ ಹೆಚ್ಚಳವಾಗಿದ್ದು, ಡಿಸೇಲ್ ಬೆಲೆ ಲೀಟರ್ಗೆ 3.12 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 102.90 ರೂ. ಇತ್ತು. ಈಗ 106.17 ರೂ.ಗೆ ಹೆಚ್ಚಳ ಆಗಿದೆ. ಡಿಸೇಲ್ ಬೆಲೆ 90.98 ರೂ. ಇತ್ತು. ಈಗ 94.10 ರೂ. .ಗೆ ಹೆಚ್ಚಳವಾಗಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಇದರ ಹೊರತಾಗಿಯೂ ಭಾರತದಲ್ಲಿ ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಜನರ ಮೇಲೆ ದರ ಹೆಚ್ಚಳದ ಹೋರೆಯನ್ನು ತಪ್ಪಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ತೆರಿಗೆ ಹೊಂದಾಣಿಕೆ ಮೂಲಕ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳ ಮೂಲಕ ದರ ಹೆಚ್ಚಳದ ಒತ್ತಡವನ್ನು ನಿಭಾಯಿಸಿದ್ದವು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರವು ಕಳೆದ ಮಾರ್ಚ್ 27 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿ, ಪ್ರತಿ ಲೀಟರ್ ಪೆಟ್ರೋಲ್ಗೆ ಅಬಕಾರಿ ಸುಂಕ 3 ರೂಪಾಯಿಗೆ ಮತ್ತು ಡೀಸೆಲ್ಗೆ ಶೂನ್ಯಕ್ಕೆ ಇಳಿಸಿತ್ತು. ಈ ಮೂಲಕ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದ ತೈಲ ಕಂಪನಿಗಳಿಗೆ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಲು ಹಾಗೂ ದೇಶದಲ್ಲಿ ತೈಲ ಬೆಲೆ ಏರಿಕೆ ತಡೆಯಲು ಸಾಧ್ಯವಾಯಿತು.
ಪ್ರಧಾನಿ ಕೆಲ ದಿನ ಹಿಂದೆ ಒಂದು ವರ್ಷ ಬಂಗಾರ ಖರೀದಿಯನ್ನ ನಿಲ್ಲಿಸಿ, ಹೆಚ್ಚೆಹೆಚ್ಚು ಸಾರ್ವಜನಿಕ ಸಾರಿಗೆ ಬಳಕೆ ಮಾಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದರು. ದೇಶದ ಆರ್ಥಿಕತೆ ಕಾಪಾಡಲು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಬೇಕಾಗುವುದು ಅನಿವಾರ್ಯವಾಗಿದೆ ಎಂದು ನಿನ್ನೆಯೇ ಆರ್ ಬಿಐ ಗವರ್ನರ್ ಹೇಳಿದ್ದರು. ಈ ಬೆನ್ನಲ್ಲೇ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ.
ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ :
ಕೇಂದ್ರ ಸರ್ಕಾರ ದೇಶಾದ್ಯಂತ ತೈಲ ಬೆಲೆ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ವಸೂಲಿ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರದ ವ್ಯಕ್ತಿ ಮೋದಿ ಮತ್ತೊಮ್ಮೆ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಮೇಲೆ ಚಾಟಿ ಬೀಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 3 ರೂಪಾಯಿ ಏರಿಕೆ ಮಾಡಲಾಗಿದೆ. ಜೊತೆಗೆ ಸಿಎನ್ಜಿ ಬೆಲೆಯನ್ನು ಸಹ 2 ರೂ ಹೆಚ್ಚಳ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಮೋದಿಯ ಸುಲಿಗೆ ಆರಂಭವಾಗಿದೆ ಎಂದು ಟೀಕಿಸಿದೆ.
