ಚನ್ನಮ್ಮನ ಕಿತ್ತೂರು: ಭಾರತದ ಸ್ವಾತಂತ್ರ್ಯ 80 ನೇ ದಿನಾಚರಣೆಯ ಶುಭ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷ ಚನ್ನಮ್ಮನ ಕಿತ್ತೂರು ಮಂಡಳ ವತಿಯಿಂದ ಹಮ್ಮಿಕೊಳ್ಳಲಾದ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಶ್ರೀಗಳು ಚಾಲನೆ ನೀಡಿದರು.
ಸೋಮವಾರ ಪೇಟೆಯಲ್ಲಿರುವ ರಾಷ್ಟ್ರಮಾತೆ ರಾಣಿ ಕಿತ್ತೂರು ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಭವ್ಯ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮ ಸರ್ಕಲ್ವರೆಗೆ ತಲುಪಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಮತ್ತು ಮಾತಾ ಭಗಿನಿಯರು ಸೇರಿದಂತೆ ಪ್ರಮುಖರ ಪಾದಯಾತ್ರೆಯು ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ಅಲ್ಲದೆ, ಮಾತಾ ಭಗಿನಿಯರು ಹಾಗೂ ಪಕ್ಷದ ಕಾರ್ಯಕರ್ತರು ಬೃಹದಾಕಾರದ ತ್ರಿವರ್ಣ ಧ್ವಜವನ್ನು ಅತ್ಯಂತ ಉತ್ಸಾಹದಿಂದ ಕೈಯಲ್ಲಿ ಹಿಡಿದುಕೊಂಡು ಸಂಚರಿಸಿದ್ದು, ನೆರೆದಿದ್ದ ಸಾರ್ವಜನಿಕರ ಕಣ್ಮನ ಸೆಳೆಯಿತು.
ರಾಷ್ಟ್ರಧ್ವಜದ ಗೌರವವನ್ನು ಎತ್ತಿಹಿಡಿಯುವುದು ಹಾಗೂ ದೇಶಭಕ್ತಿಯ ಜಾಗೃತಿಯನ್ನು ಪ್ರತಿಯೊಂದು ಮನೆಮನೆಗೂ ತಲುಪಿಸುವ ಉದಾತ್ತ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೀರಭೂಮಿ ಕಿತ್ತೂರಿನಲ್ಲಿ ನೆರವೇರಿದ ಈ ಅಭಿಯಾನವು ಸಾರ್ವಜನಿಕರಲ್ಲಿ ನವೋಲ್ಲಾಸ ಹಾಗೂ ದೇಶಪ್ರೇಮದ ಕಿಚ್ಚನ್ನು ಹತ್ತಿಸಿತು.
ಈ ವೇಳೆ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಅವರ ಧರ್ಮಪತ್ನಿ ಮಂಜುಳಾ ದೊಡಗೌಡರ, ಸಮಾಜ ಸೇವಕರು ಮತ್ತು ಪಕ್ಷದ ಮುಖಂಡರಾದ ಲಕ್ಷ್ಮಿ ಇನಾಮದಾರ್, ಮಂಡಳ ಅಧ್ಯಕ್ಷ ಶ್ರೀಕರ್ ಕುಲಕರ್ಣಿ, ಸಂದೀಪ ದೇಶಪಾಂಡೆ, ರಾಜೇಂದ್ರ ಇನಾಮದರ್, ಉಳವಪ್ಪ ಉಳ್ಳಾಗಡ್ಡಿ, ರಾಧಾ ಶಾಮ್ ಕಾದ್ರೊಳ್ಳಿ, ವಕೀಲರ ಸಂಘದ ಅಧ್ಯಕ್ಷ ಶಿವಾನಂದ್ ಬೋಗೂರ, ನ್ಯಾಯವಾದಿಗಳಾದ ನಿತ್ಯಾನಂದ ಮರೇದ, ಬಸವರಾಜ ಬುಡಶೆಟ್ಟಿ, ಸುಭಾಷ ರಾವಳ, ಕಿರಣ ಪಾಟೀಲ, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
"ರಾಷ್ಟ್ರಧ್ವಜ ನಮ್ಮ ಹೆಮ್ಮೆ – ದೇಶಭಕ್ತಿ ನಮ್ಮ ಶಕ್ತಿ" ಎಂಬ ಜಯಘೋಷಗಳೊಂದಿಗೆ ಹರ್ ಘರ್ ತಿರಂಗಾ ಅಭಿಯಾನವು ಕಿತ್ತೂರಿನಾದ್ಯಂತ ಅಭೂತಪೂರ್ವ ಯಶಸ್ಸು ಕಂಡಿತು.