ಕುಕನೂರು : ಪಟ್ಟಣದ ಜವಳ ಕಾಲೋನಿಯ ನಾಗದೇವರ ಕಟ್ಟೆಗೆ ಶ್ರಾವಣ ಸೋಮವಾರ ಪ್ರಯುಕ್ತವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ನಾಗದೇವರಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು, ಮಕ್ಕಳು ಹಾಗೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜವಳ ಕಾಲೋನಿಯ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಬಸವರಾಜ ಬಿನ್ನಾಳ ಮಾತನಾಡಿ, “ಶ್ರಾವಣ ಮಾಸವು ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜದಲ್ಲಿ ಭಕ್ತಿ, ಸಹೋದರತ್ವ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಪವಿತ್ರ ಸಮಯವಾಗಿದೆ.
ನಾಗದೇವತೆಯ ಆರಾಧನೆಯೊಂದಿಗೆ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ” ಎಂದರು.
ಜವಳ ಕಾಲೋನಿಯ ನಿವಾಸಿ ಪತ್ರಕರ್ತ ಲಕ್ಷ್ಮಣ ಮಂಡಲಗಿರಿ ಮಾತನಾಡಿ, ಭಾವೈಕ್ಯತೆಯ ಸಂಗಮವೇ ಜವಳ ಕಾಲೋನಿ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಯಾವುದೇ ಭೇದ ಭಾವವಿಲ್ಲದೆ ಪರಸ್ಪರ ಸ್ನೇಹ, ಬಾಂಧವ್ಯದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
15ನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಸಮಾಜ ಸೇವಕ ಸಾಧಿಕ್ ಖಾಜಿ ಅವರು ಜವಳ ಕಾಲೋನಿಯ ಪ್ರತಿಯೊಂದು ಕಾರ್ಯಕ್ರಮ ಹಾಗೂ ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸಿ ಸಹಾಯ ಸಹಕಾರ ನೀಡುವುದರೊಂದಿಗೆ ಎಲ್ಲರೊಂದಿಗೆ ಅವಿನಾಭಾವದಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು.
ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರೆಡ್ಡಿಯವರು ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳು ಬಂದರು ಅವರಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವುದರಿಂದ
ಕುಕನೂರು ತಾಲೂಕ ಮಾತ್ರವಲ್ಲದೇ, ಯಲಬುರ್ಗಾ, ಕೊಪ್ಪಳ, ಗಂಗಾವತಿ, ಕುಷ್ಟಗಿ ಭಾಗಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು ಇವರ ಸೇವಾ ಕಾರ್ಯ ಜನ ಮನ್ನಣೆ ಪಡೆದಿದೆ ಎಂದರು.
ಇದೇ ವೇಳೆ ಡಾ. ರಾಮಕೃಷ್ಣ ರೆಡ್ಡಿರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸಾಧಿಕ ಖಾಜಿ, ಬಸವರಾಜ ಬಿನ್ನಾಳ, ಲಕ್ಷ್ಮಣ ಮಂಡಲಗಿರಿ, ಶಿವಪ್ಪ ಕುಂಬಾರ, ಬಸಪ್ಪ ಕುಂಬಾರ, ನಾಗರಾಜ ಕಲಾದಗಿ, ಗವಿಸಿದ್ದಪ್ಪ ಹುಗ್ಗಿ, ಪ್ರಭು, ರವಿ, ಪರಸಪ್ಪ, ಮಾನಪ್ಪ ನಾಯಕ, ಯಲ್ಲಪ್ಪ ಕಾಳಿ ಪರಶುರಾಮ, ಶ್ರೀಕಾಂತ್, ಈಶಪ್ಪ ಹಂಡಿ, ನಾರಾಯಣಪ್ಪ, ರಶೀದ ಸಂಗಟಿ, ಕನಕಪ್ಪ, ರಫೀ ಕಲಬಂಡಿ, ರಾಜು ಮೇಸ್ತ್ರಿ, ಶಿವಪುತ್ರಪ್ಪ ಕಲಾದಗಿ, ಮಲ್ಲಪ್ಪ ಅಂಗಡಿ, ಕಳಕಪ್ಪ ಕುಂಬಾರ ಸೇರಿದಂತೆ ಜವಳ ಕಾಲೋನಿಯ ಮಹಿಳೆಯರು ಹಾಗೂ ಭಕ್ತರು ಉಪಸ್ಥಿತರಿದ್ದರು.