ಬೆಂಗಳೂರು,
ಜನರಿಗೆ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಪಡೆಯಲು ಸುಲಭ ದಾರಿ ಸಿಕ್ಕಿದ್ದು, ಆರೋಗ್ಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದಡಿ ‘ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್’ (HEOC) ಆರಂಭಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಈ ಕೇಂದ್ರವು ಕೇವಲ ಒಂದು ಸಹಾಯವಾಣಿಯಾಗಿರದೆ, ವಿವಿಧ ಇಲಾಖೆಗಳ ಸಮನ್ವಯದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಈ ಕೇಂದ್ರವು WHO ಮಾರ್ಗದರ್ಶನದಂತೆ ಮತ್ತು ‘ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್’ ಅಡಿಯಲ್ಲಿ ಸ್ಥಾಪಿತವಾಗಿದೆ. ಇಲ್ಲಿ ಕೇವಲ ಆರೋಗ್ಯ ಇಲಾಖೆಯಷ್ಟೇ ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಕಂದಾಯ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಮತ್ತು ಅಗ್ನಿಶಾಮಕ ದಳದಂತಹ ಪ್ರಮುಖ ಸೇವೆಗಳು ಒಂದೇ ಸೂರಿನಡಿ ಸಿಗಲಿವೆ.
ಈ ಕೇಂದ್ರವು ದಿನದ 24 ಗಂಟೆಯೂ ಸಕ್ರಿಯವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಸಾಂಕ್ರಾಮಿಕ ರೋಗಗಳ ಉಲ್ಬಣ, ಬೆಂಕಿ ಅವಘಡ ಅಥವಾ ಪ್ರಕೃತಿ ವಿಕೋಪದಂತಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿ, ಸ್ಥಳೀಯ ಮಟ್ಟದಲ್ಲಿ ಸೂಕ್ತ ನಿರ್ದೇಶನ ನೀಡಲು ಇದು ಸಹಕಾರಿಯಾಗಿದೆ. ಹಲವಾರು ಸಹಾಯವಾಣಿಗಳಿಗೆ ಕರೆ ಮಾಡಿ ಕಾಯುವ ಬದಲು, ಈಗ ಒಂದೇ ಕೇಂದ್ರದ ಮೂಲಕ ಎಲ್ಲಾ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ.
ಆರೋಗ್ಯ ಸಚಿವ ಏನಂದ್ರು?
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆ ಕೊರತೆ ಇತ್ತು. ಮುಂದೆ ಈ ರೀತಿಯ ಪರಿಸ್ಥಿತಿ ಬಂದಾಗ ಸ್ಪಷ್ಟ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಬೇಕು. WHO ಮತ್ತು ವಿಶ್ವ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ದೇಶದ ಎಲ್ಲಾ ಕಡೆ ಈ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇದನ್ನು ಸ್ಥಾಪನೆ ಮಾಡಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈ ಕೇಂದ್ರ ನಿರ್ಮಾಣ ಮಾಡಿದ್ದೇವೆ. ಇಲಾಖೆ ಅಧಿಕಾರಿಗಳು ಇತರೆ ಅಧಿಕಾರಿಗಳು ಎಲ್ಲರು ಸಹ ಕನೆಕ್ಟ್ ಮಾಡೋಕೆ ಸಹಾಯಕವಾಗಲಿದೆ. ಆ್ಯಂಬುಲೆನ್ಸ್ ಕೂಡ ಇದರ ಜೊತೆ ಸಹಯೋಗದಲ್ಲಿ ಇರುತ್ತದೆ ಎಂದಿದ್ದಾರೆ.