ಬೆಳಗಾವಿ
ಅರಬ್ಬೀ ಮತ್ತು ಪಾರ್ಷಿ ಭಾಷೆಯಿಂದ ಹುಟ್ಟಿದ ಗಜಲ್ ಸಾಹಿತ್ಯವು ಭಾರತೀಯರ ಹೃದಯವನ್ನು ಗೆದ್ದಿದೆ. ಉರ್ದು ಮತ್ತು ಹಿಂದಿ ಗಜಲ್ ಪ್ರಭಾವದಿಂದ ಕನ್ನಡದಲ್ಲಿಯೂ ಗಜಲ್ ಕಂಪು ಹರಡಿದ್ದು ಅನೇಕ ಹಿರಿ ಕಿರಿಯ ಕವಿಗಳು ಗಜಲ್ ಕಾವ್ಯವನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದ್ದಾರೆ ಎಂದು ಗಜಲ್ ಕವಿ ಈಶ್ವರ ಮಮದಾಪೂರ ಹೇಳಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸ್ಥಳೀಯ ಕನ್ನಡ ಭವನದಲ್ಲಿ ಜರುಗಿದ ಗಜಲ್ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರೀತಿ ಪ್ರೇಮ ವಿರಹ ವೇದನೆಯ ಅಭಿವ್ಯಕ್ತಿಯ ಗಜಲ್ ಇಂದು ಸುತ್ತಲ್ಲಿನ ತಲ್ಲಣಗಳಿಗೂ ಸ್ಪಂದಿಸುತ್ತಿರುವುದು ಗಮನಾರ್ಹವಾಗಿದೆ. ಅಹಿಂಸೆ ಮತ್ತು ಕ್ರೋಧದ ಮಡುವಿನಲ್ಲಿ ತೊಳಲಾಡುತ್ತಿರುವ ಇಂದಿನ ಸಂದಿಗ್ಧ ಪರಿಸ್ಥಿಯಲ್ಲಿ ಮನುಷ್ಯ ಪ್ರೀತಿಯ ಜೊತೆಗೆ ಶಾಂತಿ ಸ್ನೇಹದ ವಾತಾವರಣವನ್ನು ಕಟ್ಟುವಲ್ಲಿ ಕವಿಗಳು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ಮಂಗಲಾ ಮೆಟಗುಡ್ದ ರವರು ಮಾತನಾಡಿ, ಕ. ಸಾ. ಪ. ನಿರಂತರ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಕನ್ನಡ ಕಟ್ಟುವಲ್ಲಿ ಶ್ರಮಿಸುತ್ತಿದ್ದು ಜಿಲ್ಲೆಯ ಕವಿಗಳ ಸಹಕಾರವನ್ನು ಮರೆಯುವುದಿಲ್ಲ ಎಂದರು. ಮುಂದಿನ ದಿನಗಳಲ್ಲಿ ಗಜಲ್ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗಜಲ್ ಸಾಹಿತ್ಯ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಶ್ರೀಮತಿ ಮಾಲಾ ಅಕ್ಕಿಶೆಟ್ಟಿ, ಶ್ರೀಮತಿ ಪಿ. ಎಂ. ತುಪ್ಪದ, ಶ್ರೀಮತಿ ಇಂದಿರಾ ಮೋಟೆ ಬೆನ್ನೂರು, ಶ್ರೀಮತಿ ಆಶಾ ಯಮಕನಮರ್ಡಿ, ಶ್ರೀಮತಿ ಸುನಿತಾ ನಂದೆನ್ನವರ, ಶ್ರೀಮತಿ ಶ್ವೇತಾ ನರಗುಂದ, ಶ್ರೀಮತಿ ಆಶಾ ಸವಸುದ್ದಿ, ಶ್ರೀಮತಿ ಜ್ಯೋತಿ ಮಾಳಿ, ಡಾ. ಅನ್ನಪೂರ್ಣ ಹಿರೇಮಠ, ಬಿ. ಬಿ. ತಲ್ಲೂರ, ರೋಗಣ್ಣವರ ಇವರುಗಳು ಗಜಲ್ ಹಾಗೂ ಕವಿತೆಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಈಶ್ವರ ಮಮದಾಪೂರ ಇವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಶಿವಾನಂದ ತಲ್ಲೂರ ಸವ೯ರನ್ನು ಸ್ವಾಗತಿಸಿದರು ಆರ್.ಬಿ.ಬನಶಂಕರಿ ಪರಿಚಯಿಸಿದರು ಪ್ರಾಸ್ತಾವಿಕವಾಗಿ ಎಂ ವೈ ಮೆಣಸಿನಕಾಯಿ ರವರು ಮಾತನಾಡಿದರು. ಡಾ ಹೇಮಾವತಿ ಸೊನಳ್ಳಿ ನಿರೂಪಿಸಿದರು, ವಿ ಎಂ ಅಂಗಡಿ ವಂದಿಸಿದರು.