ಚಿಕ್ಕಮಗಳೂರು:
ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಾಡುಕೋಣ ಸೆರೆ ಕಾರ್ಯಾಚರಣೆಯ ಕುರಿತು ಮಧ್ಯ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಅಂಗವಾಗಿ ಸರ್ಕಾರ ಕಾಡುಕೋಣ ಸೆರೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಡೆದ ಕಾರ್ಯಾಚರಣೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು ಅದರ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಚಿಕ್ಕಮಗಳೂರಿನ ಹಕ್ಕಿಮಕ್ಕಿ ಸಮೀಪ ಬಾರಿ ಗಾತ್ರದ ಕಾಡುಕೋಣ ಸೆರೆ ಹಿಡಿಯಲಾಗಿದ್ದು, ಶಿವಮೊಗ್ಗ ಮೃಗಾಲಯಕ್ಕೆ ಕಾಡುಕೋಣವನ್ನು ರವಾನೆ ಮಾಡಲಾಗಿದೆ. ಅರಣ್ಯ ಇಲಾಖೆ, ಶನಿವಾರ ಮೂಡಿಗೆರೆ ಅರಣ್ಯ ಉಪವಿಭಾಗದ ಆಲ್ಲೂರು ವಲಯದ ಹಕ್ಕಿಮಕ್ಕಿ ಸಮೀಪ ಒಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಎರಡು ದಿನಗಳಿಂದ ಕೊಪ್ಪ ಅರಣ್ಯ ವಿಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಶನಿವಾರ ಆಲ್ಲೂರು ವಿಭಾಗಕ್ಕೆ ಕಾರ್ಯಾಚರಣೆ ನಡೆಸಿದರು. ಅರೆನೂರು ಸಮೀಪದ ಹಕ್ಕಿಮಕ್ಕಿ ಸಮೀಪ ಆಗಾಗ್ಗೆ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡುಕೋಣಗೆ 4 ಗಂಟೆ ಸುಮಾರಿಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು. ವೈದ್ಯರಾದ ಡಾ. ರಮೇಶ್ ತಂಡ ಹಾಗೂ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಮಳೆಯ ನಡುವೆಯೇ ಕಾರ್ಯಾಚರಣೆ ನಡೆಸಿದರು.
ಅರೇನೂರು ಸಮೀಪ ಸೆರೆ ಹಿಡಿದ ಕಾಡುಕೋಣವನ್ನು ಸ್ಥಳಾಂತರಿಸಿದ ಅರಣ್ಯ ಸಿಬ್ಬಂದಿ:
ಕೊಪ್ಪ ಅರಣ್ಯ ವಿಭಾಗದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡುಕೋಣಕ್ಕೆ ಅರವಳಿಕೆ ನೀಡಲಾಗಿತ್ತು. ಆದರೆ, ಭಾರಿ ತೂಕದ ಕಾಡುಕೋಣವನ್ನು ಇಳಿಜಾರು ಪ್ರದೇಶದಿಂದ ರಸ್ತೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಕಾಡಿಗೆ ಬಿಡಲಾಗಿತ್ತು. ಇದಕ್ಕೆ ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಮತ್ತೊಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
