ರಾಮದುರ್ಗ: ಜನರು ಹಲವಾರು ಸಮಸ್ಯೆಗಳನ್ನು ತೆಗೆದುಕೊಂಡು ತಾಲೂಕು ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಲ್ಲಿ ಮುಂದಾಗಬೇಕು. ಒಂದು ವೇಳೆ ಏನಾದರೂ ನೆಪ ಹೇಳಿ ಸತಾಯಿಸುವ ಕೆಲಸ ಮಾಡಿದರೇ ಅಂತವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿರುವ ಗುರುಭವನದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ನೂತನ ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾದ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ಮುಟ್ಟಿಸುವ ಉದ್ದೇಶ ರಾಜ್ಯ ಸರಕಾರದ್ದಾಗಿದೆ. ಕಾರಣ ಯಾವುದೇ ಇಲಾಖೆಯ ಅಧಿಕಾರಿಗಳಾಗಲಿ ಸಾರ್ವಜನಿಕರ ಅಹವಾಲಗಳನ್ನು ಸ್ವೀಕರಿಸಿ, ಸರಕಾರದ ಸೇವೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ ತಾಲೂಕು, ಹೋಬಳಿ, ಹಾಗೂ ಗ್ರಾ.ಪಂ ಮಟ್ಟದಲ್ಲಿಯೂ ಕಾರ್ಯಕ್ರಮ ಏರ್ಪಡಿಸಿ ಜನರ ಸಮಸ್ಯೆ ಆಲಿಸಲಾಗುವದು ಎಂದು ತಿಳಿಸಿದರು.
ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ, ಇಲಾಖೆಯಲ್ಲಿರುವ ಯೋಜನೆಗಳಿಗೆ ವೇಗ ನೀಡುವದೇ ಇದರ ಉದ್ದೇಶವಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಒಂದೆಡೆ ಸೇರಿ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರ ಒದಗಿಸುವ ವಿನೂತನ ಕಾರ್ಯಕ್ಕೆ ಸರಕಾರ ಆದೇಶದ ಮೂಲಕ ಸೂಚಿಸಿದೆ. ಆದ್ದರಿಂದ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕರಿಸಿ ಜನ ಸೇವೆಗೆ ಬದ್ದರಾಗಬೇಕು ಎಂದು ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಮಾಡುತ್ತಿರುವುದೇ ಪ್ರಜಾಸೇವೆ, ಅದರ ವೇಗವನ್ನು ಇದೇ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಿಗೆ ಮನವಿ ಸಲ್ಲಿಸಿದರು. ಜನರ ಅಹವಾಲು ಸ್ವೀಕರಿಸಿದ ಶಾಸಕರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತ್ವರಿತ ಪರಿಹಾರಕ್ಕೆ ಸೂಚಿಸಿದರು.
ಗ್ಯಾರಂಟಿ ಸಮಿತಿಯ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದಇಜಾನ ಸೂಬೂರ, ತಾಲೂಕಾ ವೈದ್ಯಾಧಿಕಾರಿ ಆರ್.ಎಸ್. ಬಂತಿ, ಬಿಇಒ ಸುರೇಂದ್ರ ಕಾಂಬಳೆ, ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ, ಪಶು ವೈದ್ಯಾಧಿಕಾರಿ ಡಾ| ಗಿರೀಶ ಪಾಟೀಲ, ಹೆಸ್ಕಾಂ ಇಇ ಆನಂದ ನಾಯಕ, ಇಎಎ ಶಿವಪ್ರಕಾಶ ಕರಡಿ, ಎಡಿಎಲ್ಆರ್ ಪ್ರಕಾಶ ಸತ್ತಿಗೇರಿ, ಸಿಡಿಪಿಒ ಶಂಕರ ಕುಂಬಾರ, ಆಹಾರ ನಿರೀಕ್ಷಕ ಸಂಜೀವ ಹಮ್ಮನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.