ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿಯಿ ಇರುವ ತುಂಗಭದ್ರಾ ಜಲಾಶಯ, ಕರ್ನಾಟಕದ ನಾಲ್ಕು ಜಿಲ್ಲೆಗಳು, ನೆರೆಯ ತೆಲಂಗಾಣ, ಆಂದ್ರಪ್ರದೇಶದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ತುಂಗಭದ್ರಾ ಆಧಾರವಾಗಿದೆ. ಆದರೆ, 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂನ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು. ಜೊತೆಗೆ ದೊಡ್ಡ ಮಟ್ಟದ ಆತಂಕವನ್ನೂ ಉಂಟುಮಾಡಿತ್ತು.
ಗೇಟ್ ಕೊಚ್ಚಿಕೊಂಡು ಹೋಗಲು ತುಂಗಭದ್ರಾ ಡ್ಯಾಂ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ ಎಂಬ ಪ್ರಶ್ನೆ ಉದ್ಬವಿಸಿತ್ತು. ಇದಕ್ಕೆ ಕಾರಣ, ಯಾವುದೇ ಜಲಾಶಯದ ಕ್ರಸ್ಟಗೇಟ್ ಗಳು, ಚೈನ್ ಲಿಂಕ್ಗಳನ್ನು ಬದಲಾಯಿಸದೇ ಇರುವುದು. ತುಂಗಭದ್ರಾ ಜಲಾಶಯಕ್ಕೆ ಎಪ್ಪತ್ತು ವರ್ಷಗಳ ಹಿಂದೆ ಕ್ರಸ್ಟಗೇಟ್, ಚೈನ್ ಲಿಂಕ್ಗಳನ್ನು ಅಳವಡಿಸಿದ್ದು, ಇಲ್ಲಿಯವರಗೆ ಒಮ್ಮೆಯೂ ಬದಲಾಯಿಸಿಲ್ಲ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡುವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತು ಅಂತ ತಜ್ಞರು ಹೇಳಿದ್ದರು.