ಆಸ್ಪತ್ರೆಗಳಲ್ಲಿ ಭಾಗಶಃ ನರ್ಸ್ ಹಾಗೂ ವೈದ್ಯರುಗಳಿಗೆ ಕನ್ನಡ ಬರ್ತಿಲ್ಲ. ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನರ್ಸ್ ಹಾಗೂ ವೈದ್ಯರಿಗೆ ಕನ್ನಡ ಬಾರದ ಹಿನ್ನೆಲೆ ಸಾಹಿತಿಯೊಬ್ಬರಿಗೆ ಸಮಸ್ಯೆಯಾಗಿತ್ತು. ಸಮಸ್ಯೆ ಏನೆಂಬುದು ವೈದ್ಯರಿಗೆ ಅರ್ಥವಾಗದೆ ಸಮಸ್ಯೆ ಆಗಿತ್ತು. ಇದರ ಬೆನ್ನಲ್ಲೇ ಕನ್ನಡ ಗೊತ್ತಿರುವವರ ನೇಮಕಾತಿಗೆ ಪ್ರಾಧಿಕಾರ ಆಗ್ರಹಿಸಿದೆ.
ಆಸ್ಪತ್ರೆಗಳಲ್ಲಿ ನೇಮಕಾತಿ ಮಾಡುವಾಗ ಶೇ 60 ರಷ್ಟು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿದೆ. ಈ ವಿಚಾರವಾಗಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರದಲ್ಲೇನಿದೆ?
ಎಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯದ ಸಮಸ್ಯೆ ಬಗ್ಗೆ ಎಲ್ಲರಿಗೂ ಇಂಗ್ಲಿಷ್ನಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಇದರಿಂದ ವೈದ್ಯರಿಗೆ ರೋಗಿಗಳ ಸಮಸ್ಯೆ ಏನೆಂಬುದು ಸರಿಯಾಗಿ ತಿಳಿಯದೇ ಯಡವಟ್ಟುಗಳಾಗುತ್ತಿವೆ. ಹೀಗಾಗಿ ಪ್ರಾದೇಶಿಕ ಭಾಷೆಯ ಜನರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಇದರಿಂದ ರೋಗಿಗಳ ಆರೋಗ್ಯಕ್ಕೂ ಒಳಿತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರೋಗ್ಯ ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಸ್ಪತ್ರೆಗಳಲ್ಲಿ ಹೆಚ್ಚಿನ ನರ್ಸ್ಗಳು, ವೈದ್ಯರಿಗೆ ಕನ್ನಡ ಬರುತ್ತಿಲ್ಲ. ಹೀಗಾಗಿ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.