ಬೆಂಗಳೂರು : ಕೇಂದ್ರ ಸರ್ಕಾರದ ಮಹಿಳಾ ಮೀಸಲು ಮಸೂದೆ ಮಂಡನೆಯೇ ಒಂದು ಪ್ರಹಸನ ಹಾಗು ಬಿಜೆಪಿಯ ಚುನಾವಣಾ ಗಿಮಿಕ್ ಆಗಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಕವಿತಾ ಜೋಡಿದಾರ್ ಅವರು ಪ್ರತಿಕ್ರಿಯಿಸಿದ್ದಾರೆ.
2010ರಲ್ಲಿ, ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 30ರಷ್ಟು ಮೀಸಲಾತಿ ನೀಡಬೇಕೆನ್ನುವ ಮಸೂದೆಯ ಮಂಡನೆಯಾಗಿತ್ತು . ಇದಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದ್ದು ಲೋಕಸಭೆಯಲ್ಲಿ ಒಮ್ಮತದ ಕೊರತೆ ಮತ್ತು ಮತದಾನವಾಗದ ಕಾರಣ ಈ ಮಸೂದೆ ಅಂಗೀಕಾರವಾಗದೆ ಉಳಿಯಿತು. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ.
2023 ಸೆಪ್ಟೆಂಬರ್ 19ರಂದು ಮತ್ತೊಮ್ಮೆ ಸಂವಿಧಾನದ ಆರ್ಟಿಕಲ್ 334 ಎ ತಿದ್ದುಪಡಿ ತಂದು ಈ ಮಸೂದೆ ಮಂಡನೆ ಆಯಿತು. ಅಂದು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಸೆಪ್ಟೆಂಬರ್ 20ರಂದು ಎಲ್ಲಾ ಪಕ್ಷದವರು ಸೇರಿ ಸರ್ವಾನುಮತದಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಮತ್ತೊಮ್ಮೆ ಈ ಮಸೂದೆಯನ್ನು ಅನುಮೋದಿಸಿ ಕೊಟ್ಟಿದ್ದಾರೆ. ಆದರೆ ಮಸೂದೆ ಅನುಮೋದನೆಯಾದ ನಂತರ 2024ರ ಲೋಕಸಭಾ ಚುನಾವಣೆಗೆ ಇದನ್ನು ಕೇಂದ್ರ ಬಿಜೆಪಿ ಸರ್ಕಾರ ಪರಿಗಣಿಸಿಲಿಲ್ಲ! ಎಂದು ಕವಿತಾ
ಜೋಡಿದಾರ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಈಗ ಕೇಂದ್ರ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳಾ ಮತದಾರರ ಮೇಲೆ ಪ್ರಭಾವವನ್ನು ಬೀರುವ ಸಲುವಾಗಿ ಇದ್ದಕ್ಕಿದ್ದ ಹಾಗೆ ಕಳೆದ ಏಪ್ರಿಲ್ 16 ಮತ್ತು 17ರಂದು ವಿಶೇಷ ಅಧಿವೇಶನನ್ನು ಕರೆದು ಈಗಾಗಲೇ ಅನುಮೋದನೆಯಾಗಿರುವ ಮಹಿಳಾ ಮೀಸಲಾತಿ ಮಸೂದೆ ಜೊತೆಗೆ ಸೇರಿಸಿ ಕ್ಷೇತ್ರಗಳ ಪುನರ್ ವಿಂಗಡನೆ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಯನ್ನು ಮಂಡಿಸುತ್ತಾರೆ! ಮೇಲ್ನೋಟಕ್ಕೆ ಇದೊಂದು ಪೊಲಿಟಿಕಲ್ ಗಿಮಿಕ್ ಎನ್ನುವುದು ಈಗಾಗಲೇ ಸಾಬೀತಾಗಿದೆ. ಬಿಜೆಪಿ ಪರವಾಗಿರುವ ವಾಟ್ಸಪ್ ಯೂನಿವರ್ಸಿಟಿ, ಗೋಬೆಲ್ಸ್ ಥಿಯರಿಯನ್ನೇ ಹೊತ್ತು ಮೆರೆಸುವ ಬಿಜೆಪಿ ಐ ಟಿ ಸೆಲ್ ಸೋಶಿಯಲ್ ಮೀಡಿಯಾಗಳಲ್ಲಿ " ಕಾಂಗ್ರೆಸ್ ನಿಂದ ಮಹಿಳಾ ಮೀಸಲಾತಿ ಮಸೂದೆ ಬಿದ್ದುಹೋಯಿತು ಕಾಂಗ್ರೆಸ್ ಮಹಿಳಾ ವಿರೋಧಿ" ಎಂದು ಬಿಂಬಿಸುವ ಸುಳ್ಳು ಪ್ರಚಾರದ ತಂತ್ರಗಳನ್ನು ಈ ದೇಶ ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡುವ ಉದ್ದೇಶದಿಂದಲೇ 2026 ಸಂವಿಧಾನ ತಿದ್ದುಪಡಿ ಮಸೂದೆ ತಂದಿದ್ದಲ್ಲಿ ಅದಕ್ಕೆ 2011ರ ಸೆನ್ಸೆಸ್ ಆಧರಿಸಿ ಡಿಲಿವಿಟೇಷನ್ ಮಾಡುವ ಕುತಂತ್ರದ ಉಪ ಷರತ್ತುಗಳನ್ನು ಸೇರಿಸಿದ್ದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು (ಏ. 22) ಬೆಂಗಳೂರಿನಲ್ಲಿ ನಡೆಸಲಾಗಿದೆ.