ಬೆಳಗಾವಿ: ವೈರಾಗ್ಯ, ಭಕ್ತಿ ಮತ್ತು ಸಮಾನತೆಯ ಪ್ರತಿರೂಪವಾದ ಅಕ್ಕಮಹಾದೇವಿ ಅವರ ಜಯಂತಿಯನ್ನು ಇಂತಹ ಭಕ್ತಿಭಾವದಿಂದ ಆಚರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಗಜೇಂದ್ರಗಡದ ಅಕ್ಕನ ಬಳಗ ಅಧ್ಯಕ್ಷರಾದ ಸಂಯುಕ್ತ ಬಂಡಿ ಅವರು ಹೇಳಿದರು.
ನಗರದ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ "ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತಿ" ಪ್ರಯುಕ್ತ ಆಯೋಜಿಸಲಾದ " ಅಕ್ಕನ ಜಯಂತಿ ಉತ್ಸವ" ವನ್ನು ಆಚರಿಸಲಾಯಿತು. ಬಳಿಕ, ಅಕ್ಕಮಹಾದೇವಿ ತಾಯಿಯವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಅವರು ಮಾತನಾಡಿದರು.
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣೆ, ಕನ್ನಡ ಸಾಹಿತ್ಯ ಲೋಕದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಅಕ್ಕಮಹಾದೇವಿ. ಅಕ್ಕ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿ, ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತತ್ವಗಳು ನಾವಿಂದೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಕ್ಕಮ್ಮನ ವಚನಗಳು ಇಂದಿಗೂ ಪ್ರಸ್ತುತ. ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ. ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ, ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಮಹಾ ತಾಯಿ ಅಕ್ಕಮಹಾದೇವಿ ಒಬ್ಬ ಶ್ರೇಷ್ಠ ಕವಯತ್ರಿ, ಸಾಕ್ಷಾತ್ ಸೃಷ್ಟಿಕರ್ತನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕನ ಹಾದಿ ಬಲು ರೋಚಕವಾಗಿದೆ. ಅವರ ವಚನಗಳು ಮನುಷ್ಯರು ಜೀವನಕ್ಕೆ ದಾರಿದೀಪ, ನಾವು ಸಂಸ್ಕಾರಯುತವಾಗಿ ಇರಬೇಕು ಎಂಬುವುದನ್ನು ಬಹಳಷ್ಟು ಅರ್ಥದಲ್ಲಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಾಳ, ಸಹ ಕಾರ್ಯದರ್ಶಿ ಸರೋಜಾ ನಿಶಾನ್ದಾರ ಹಾಗೂ ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಇತರರು ಇದ್ದರು.