ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥ
ತುಮಕೂರು, ನವೆಂಬರ್ 3: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿಭಾಗದಲ್ಲಿ ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ. ತೆರಿಯೂರು ಗ್ರಾಮದ 10 ಮಂದಿ ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ 5 ಮಂದಿ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಹಿಂದೂಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಸ್ವಸ್ಥರಾದ ನಾಗರಾಜು ಮತ್ತು ನಿಂಗಕ್ಕ ಅವರನ್ನು ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೆರಿಯೂರು ಗ್ರಾಮದ ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ ಹಾಗೂ ಟಿ. ನಾಗರಾಜು ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳವಾದ ಚರ್ಲಾಪಳ್ಳಿ ಮುದ್ದೇನಹಳ್ಳಿ ಗೇಟ್ ಬಳಿ ಕೊಡಿಗೇನಹಳ್ಳಿ ಪೊಲೀಸರು ಹಾಗೂ ಆಂಧ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.