ಚಾಮರಾಜನಗರ : ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಇತ್ತೀಚೆಗೆ ನಡೆದ ಅರಣ್ಯ ಇಲಾಖೆಯ ಶೂಟೌಟ್ನಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಪ್ರತೀಕಾರವಾಗಿ ಕಳ್ಳಬೇಟೆಗಾರರು ಅರಣ್ಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಸರಣಿ ಅಕ್ರಮ ಕೃತ್ಯಗಳನ್ನು ಎಸಗುತ್ತಿದ್ದಾರೆ.

ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ಬಫರ್ ವಲಯದಲ್ಲಿರುವ ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆ (2.5 ಹೆಕ್ಟೇರ್) ಅರಣ್ಯ ಸಂಪೂರ್ಣವಾಗಿ ಭಸ್ಮವಾಗಿದೆ. ಅಲ್ಲದೆ, ಕೊತ್ತನೂರು ವಲಯದ ಮಿಂಚಿನರೆಹಳ್ಳ ಹಾಗೂ ಜಾಗೇರಿ ಬಳಿಯ ಅಕ್ರಮ ಬೇಟೆ ತಡೆ ಶಿಬಿರಗಳನ್ನು ಡೈನಮೈಟ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಿ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಕಚೇರಿಗಳಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಇನ್ನೊಂದೆಡೆ, ಶೂಟೌಟ್ ಪ್ರಕರಣದ ತನಿಖೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ. ಇದೇ ವೇಳೆ, ಮಾಜಿ ಸಚಿವ ಎನ್. ಮಹೇಶ್ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿಯು ಮೃತಪಟ್ಟ ಕುಮಾರ್, ಆಂತೋಣಿಸ್ವಾಮಿ ಮತ್ತು ಪೀಟರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಮೃತರ ಕುಟುಂಬಸ್ಥರು ತಮ್ಮವರು ಬೇಟೆಗಾರರಲ್ಲ, ಹಸುಗಳನ್ನು ಹುಡುಕಲು ಹೋಗಿದ್ದಾಗ ಅರಣ್ಯ ಇಲಾಖೆ ಅಮಾನುಷವಾಗಿ ಗುಂಡಿಕ್ಕಿ ಕೊಂದಿದೆ ಎಂದು ಆರೋಪಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.