ಇಂದಿನ ಸಮಾಜದಲ್ಲಿ ಶಿಕ್ಷಣವೆಂದರೆ ಕೇವಲ ಅಂಕಗಳ ಸ್ಪರ್ಧೆಯಾಗಿ ಬದಲಾಗುತ್ತಿರುವುದು ನೋವಿನ ಸಂಗತಿ.ಮಕ್ಕಳು ಪುಸ್ತಕದ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದಾರೆ,ಆದರೆ ಜೀವನದ ಮೌಲ್ಯಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ೨೦೨೬ರ ಶಿಕ್ಷಣ ವ್ಯವಸ್ಥೆ ಕೇವಲ ಉದ್ಯೋಗ ಪಡೆಯುವ ಸಾಧನವಾಗಿರದೆ, ಒಬ್ಬ ವ್ಯಕ್ತಿಯನ್ನು ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವ ದಿಕ್ಕಿನಲ್ಲಿ ಸಾಗಬೇಕು. ಶಾಲೆಗಳು ಅಂಕಗಳ ಕಾರ್ಖಾನೆಗಳಾಗದೆ,ವ್ಯಕ್ತಿತ್ವ ನಿರ್ಮಾಣದ ಮಂದಿರಗಳಾಗಬೇಕು.
ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ,ಇಂಗ್ಲಿಷ್ ಜೊತೆಗೆ ಮಾನವೀಯತೆ, ಪ್ರಾಮಾಣಿಕತೆ,ಶಿಸ್ತು, ದೇಶಪ್ರೇಮ,ಪರಿಸರ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಸಬೇಕು.ಇಂದಿನ ಕಾಲದಲ್ಲಿ Artificial Intelligence,Robotics, Digital Learning ಮುಂತಾದ ತಂತ್ರಜ್ಞಾನಗಳು ಶಿಕ್ಷಣದ ಪ್ರಮುಖ ಭಾಗವಾಗುತ್ತಿರುವುದರಿಂದ, ಮಕ್ಕಳು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸುವ ಜ್ಞಾನವನ್ನು ಪಡೆಯಬೇಕು.ಆದರೆ ಯಂತ್ರಗಳ ಜೊತೆ ಬದುಕುತ್ತಾ ಮಾನವ ಸಂಬಂಧಗಳನ್ನು ಕಳೆದುಕೊಳ್ಳಬಾರದು ಎಂಬ ಅರಿವು ಕೂಡ ಶಿಕ್ಷಣ ನೀಡಬೇಕು.
ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ,ಪ್ರತಿಯೊಬ್ಬ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರಕುವಂತೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು.ಕನ್ನಡ ಮಾಧ್ಯಮದಲ್ಲೇ ಓದಿದ ವಿದ್ಯಾರ್ಥಿಗೂ ವಿಶ್ವಮಟ್ಟದ ಅವಕಾಶಗಳು ದೊರಕಬೇಕು. ಪರೀಕ್ಷೆ ಜೀವನದ ಅಂತಿಮ ಗುರಿಯಲ್ಲ ಎಂಬ ಸತ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು.
ಕೇವಲ ಮೂರು ಗಂಟೆಗಳ ಪರೀಕ್ಷೆಯಿಂದ ಮಕ್ಕಳ ಪ್ರತಿಭೆಯನ್ನು ಅಳೆಯಬಾರದು;ಕಲೆ,ಕ್ರೀಡೆ, ಸಂಗೀತ,ನಾಯಕತ್ವ ಮತ್ತು ಸಾಮಾಜಿಕ ಸೇವೆಗೂ ಸಮಾನ ಗೌರವ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ವಿಶೇಷ ಪ್ರತಿಭೆ ಅಡಗಿದೆ;ಅದನ್ನು ಗುರುತಿಸಿ ಬೆಳೆಸುವ ಶಿಕ್ಷಣವೇ ನಿಜವಾದ ಶಿಕ್ಷಣ.ಶಿಕ್ಷಕರು ಕೇವಲ ಪಾಠ ಹೇಳುವವರಾಗದೆ, ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಮಾರ್ಗದರ್ಶಕರಾಗಬೇಕು. ಪ್ರೀತಿ,ಪ್ರೇರಣೆ ಮತ್ತು ಸಹನೆಯ ಮೂಲಕ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳು ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ.ಜೊತೆಗೆ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಯನ್ನೂ ಶಿಕ್ಷಣ ನೀಡಬೇಕು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಮರ, ಮಣ್ಣು,ಭಾಷೆ ಮತ್ತು ಪರಂಪರೆಯ ಮಹತ್ವವನ್ನು ಅರಿಯಬೇಕು.ಕನ್ನಡ ಭಾಷೆ ಮತ್ತು ಭಾರತೀಯ ಮೌಲ್ಯಗಳನ್ನು ಕಾಪಾಡುವ ಮನೋಭಾವ ಬೆಳೆಸಬೇಕು. ೨೦೨೬ರ ಶಿಕ್ಷಣವು ಕೇವಲ ಪುಸ್ತಕದ ಜ್ಞಾನವಲ್ಲ,ಬದುಕಿನ ಜ್ಞಾನವನ್ನು ನೀಡುವ ಶಕ್ತಿಯಾಗಬೇಕು.“ಅಂಕಗಳು ಜೀವನವನ್ನು ಆರಂಭಿಸಬಹುದು;ಆದರೆ ಮೌಲ್ಯಗಳೇ ಜೀವನವನ್ನು ಮಹತ್ವಪೂರ್ಣವಾಗಿಸುತ್ತವೆ” ಎಂಬ ಸಂದೇಶವನ್ನು ಸಮಾಜ ಅರಿಯಬೇಕಾಗಿದೆ.

ಅಂತೋಣಿ ಮುತ್ತು ವಿ
ಶಿಕ್ಷಕರು
