ಬಳ್ಳಾರಿ, ಜೂ.18: ತಾಲೂಕಿನ ಕುಡುತಿನಿ ಸುತ್ತಮುತ್ತಲು ಸ್ಥಾಪಿಸಲು ಉದ್ದೇಶಿಸಿದ್ದ ಕೈಗಾರಿಕೆಗಳಿಗೆ ಜಮೀನು ಕಳೆದುಕೊಂಡ ಭೂ ಸಂತ್ರಸ್ತ ರೈತರು ತಮಗೆ ನ್ಯಾಯಯುತ ಭೂ ಬೆಲೆ ಹಾಗೂ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ಬಳ್ಳಾರಿ ಜಿಲ್ಲೆ ಬಂದ್ ನಡೆಸಿದರು.
ಭೂ ಸಂತ್ರಸ್ಥರ ಹೋರಾಟ ಸಮಿತಿ, ವಿವಿಧ ಪ್ರಗತಿಪರ, ಕನ್ನಡ ಪರ, ರೈತ, ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳು ಈ ಬಂದ್ ಹೋರಾಟದಲ್ಲಿ ಪಾಲ್ಗೊಂಡಿದ್ದವು.
ಬೆಳಿಗ್ಗೆ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಸೇರಿದ ಹೋರಾಟಗಾರರು ತಾವು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲವೆಂದು ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶವ್ಯಕ್ತಪಡಿಸಿದರು.
ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿಧದರಿಂದ ಬೆಂಗಳೂರು ರಸ್ತೆ, ತೇರು ಬೀದಿ, ಕಾಳಮ್ಮ ರಸ್ತೆ, ಬ್ರಾಹ್ಮಣ ಬೀದಿ ಮೊದಲಾದ ರಸ್ತೆಗಳಲ್ಲಿನ ಅಂಗಡಿ ಮಳಿಗೆಗಳು ಮುಚ್ಚಿದ್ದವು. ಕೆಲವರು ಅರ್ಧಮರ್ಧ ತೆರೆದು ಗೊರಾಕಿಗಳಿಗಾಗಿ ಕಾಯುತ್ತಿದ್ದರು.
ಬಂದ್ ಇರುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುತ್ತಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ನೂರಾರು ರೈತರು, ಮುಖಂಡರು ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ಸೇರಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಸರ್ಕಲ್ ನ ಒಂದು ಭಾಗದಲ್ಲಿ ಹೋರಾಗಾರರನ್ನು ಕೂರಿಸಿ ಪೊಲೀಸರು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದರು. ಸಾರಿಗೆ ಸಂಚಾರ ವ್ಯವಸ್ಥೆ ಎಂದಿನಂತೆ ಇತ್ತು. ಸಿನಿಮಸ ಥೇಟರ್ ಬಂದ್ ಮಾಡಿತ್ತು. ಎಪಿಎಂಸಿಯಲ್ಲಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಪೊಲೀಸರು ವ್ಯವಸ್ಥಿತವಾಗಿ ಬಂದೋ ಬಸ್ತು ಮಾಡಿದ್ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರುಗಳಾದ ಯು.ಬಸವರಾಜ್, ಎಸ್.ವೈ.ಗುರುಶಾಂತ, ಜೆ.ಸತ್ಯಬಾಬು, ಮಾಧವರೆಡ್ಡಿ ಮೊದಲಾದವರು.
ಸಂತ್ರಸ್ತರಿಗೆ ನ್ಯಾಯಯುತ ಭೂಬೆಲೆ ನೀಡಲು ಸರ್ಕಾರದ ವಿಳಂಬ ಧೋರಣೆ ಹಾಗೂ ಕೆಐಎಡಿಬಿ ಕಾರ್ಯವೈಖರಿಯನ್ನು ಖಂಡನೀಯ.ನಮ್ಮ ಬಂದ್ ನ ಹೋರಾಟ ಇಂದು ಜಿಲ್ಲೆಯಾದ್ಯಂತ ಪಸರಿಸಿದೆ. ಇದು ಕುಡುತಿನಿ ರೈತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ರೈತ ಸಮುದಾಯಕ್ಕೆ ಸರ್ಕಾರ ಮಾಡಿರುವ ಮೋಸ ಎಂದರು.
ಮಿತ್ತಲ್, ಬ್ರಾಹ್ಮಣಿ ಹಾಗೂ ಎನ್ಎಂಡಿಸಿ ಕೈಗಾರಿಕೆಗಳಿಗಾಗಿ ಕುಡುತಿನಿ, ಹರಗಿನದೋಣಿ, ವೇಣಿವೀರಾಪುರ, ಕೊಳಗಲ್ಲು, ಜಾನೆಕುಂಟೆ, ಯರಂಗಳಿ ಮತ್ತು ಸಿದ್ದಮ್ಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 12,500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಒಂದುವರೆ ದಶಕವಾಗಿದೆ. ಕೈಗಾರಿಕೆಗಳೂ ಇಲ್ಲ, ಜನತೆಗೆ ಉದ್ಯೋಗವೂ ಇಲ್ಲ. ಈಗ ಕೆಐಎಡಿಬಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಹೊರಟು ನಮ್ಮಭೂಮಿಯನ್ನು ಜಿಂದಾಲ್ ಗೆ ಹೆಚ್ಚಿನ ಬೆಲೆಗೆ ನೀಡಲು ಮುಂದಾಗಿದೆ ಇದು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಡೆಯುತ್ತಿದೆಂದರು.
ರೈತರಿಗೆ ಸೂಕ್ತ ಪರಿಹಾರ ಮತ್ತು ನ್ಯಾಯಯುತ ಭೂ ಬೆಲೆ ನೀಡಬೇಕು. ಜಿಲ್ಲಾ ನ್ಯಾಯಾಲಯದ ತೀರ್ಪಿನ ಅನ್ವಯ ಭೂ ಮೌಲ್ಯ ನಿಗದಿಪಡಿಸುವಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಬೇಕೆಂದರು.
ಬಂದ್ ನಿಂದ ರಸ್ತೆಗಳಲ್ಲಿ ಜನರ ಸಂಚಾರ ವಿರಳವಾಗಿತ್ರು. ಮಾರಾಟ ಮಾಡಲು ತಂದ ಹಣ್ಣುಗಳ ಗಾಡಿಗಳು ಕೊಳ್ಳುವವಿಲ್ಲದೆ ಬಿಕೋ ಎನ್ನುತ್ತಿದ್ದವು.
