ಬಾಗಲಕೋಟೆ, ಜುಲೈ ೨೪ : ಬಾಗಲಕೋಟೆ ನಗರ ಪ್ರದೇಶದಲ್ಲಿ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ವಿವಿಧ ಸರಕಾರಿ ಕಚೇರಿಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ, ಕಾರ್ಯವೈಖರಿಯನ್ನು ಪರಿಶೀಲಿಸಿದರು. ಪರಿಶೀಲನಾ ವೇಳೆಯಲ್ಲಿ ಕಂಡುಬಂದ ಅವ್ಯವಸ್ಥೆ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸೇವೆಯಲ್ಲಿ ಲೋಪಗಳಿಗೆ ಸಂಬಂಧಿಸಿದಂತೆ ಸು-ಮೋಟೋ ಪ್ರಕರಣಗಳನ್ನು ದಾಖಲಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಾರಂಭದಲ್ಲಿ ನವನಗರದ ಎಪಿಎಂಸಿಗೆ ಭೇಟಿ ನೀಡಿದ ಅವರು ಅಲ್ಲಿನ ಮೂಲಸೌಕರ್ಯ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ರೈತರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಎಪಿಎಂಸಿಯಲ್ಲಿ ೩ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಹಮಾಲನಿಗೆ ಇನ್ನೂ ಗುರುತಿನ ಚೀಟಿಗಳನ್ನು ವಿತರಿಸದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತರು, ಅರ್ಹ ಹಮಾಲರೆಲ್ಲರಿಗೂ ಶೀಘ್ರದಲ್ಲೇ ಗುರುತಿನ ಚೀಟಿಗಳನ್ನು ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಾರುಕಟ್ಟೆಯಲ್ಲಿ ರೈತರಿಂದ ಅಥವಾ ವ್ಯಾಪಾರಿಗಳಿಂದ ಕಮಿಷನ್ ಹೆಸರಿನಲ್ಲಿ ಯಾವುದೇ ಅನಧಿಕೃತ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬ ಕುರಿತು ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಹಮಾಲರಿಂದ ಮಾಹಿತಿ ಪಡೆದು ವಿಚಾರಣೆ ನಡೆಸಿದರು. ಸರ್ಕಾರ ನಿಗದಿಪಡಿಸಿರುವ ನಿಯಮಗಳಂತೆ ಮಾತ್ರ ವ್ಯವಹಾರ ನಡೆಯಬೇಕು. ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ಅಕ್ರಮ ಅಥವಾ ಅನಧಿಕೃತ ಕಮಿಷನ್ ವಸೂಲಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಸು-ಮೋಟೋ ಪ್ರಕರಣ ದಾಖಲು ಮಾಡಿದರು.
ಸೀಮಿಕೇರಿ ಕ್ರಾಸ್ ಬಳಿ ಇರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು, ಕುಡಿಯುವ ನೀರಿನ ಶುದ್ಧೀಕರಣ ಪ್ರಕ್ರಿಯೆ, ನೀರಿನ ಗುಣಮಟ್ಟ ಪರೀಕ್ಷೆ, ವಿತರಣಾ ವ್ಯವಸ್ಥೆ ಹಾಗೂ ನಿರ್ವಹಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನೀರು ಪರೀಕ್ಷೆ ಮಾಡಿದ ಮಾಹಿತಿ ಕೇಳಿದಾಗ ಮಾಹಿತಿ ನೀಡದಾಗ ಪ್ರತಿ ತಿಂಗಳು ನೀರಿನ ಪರೀಕ್ಷೆಗೆ ಒಳಪಡಿಸಲು ತಿಳಿಸಿದರು. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವಂತೆ ಸೂಚಿಸಿದರು.
ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಹೊರರೋಗಿ ವಿಭಾಗ, ವಾರ್ಡ್ಗಳು, ಔಷಧ ವಿತರಣೆ ಕೇಂದ್ರ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳೊಂದಿಗೆ ಸಂವಾದ ನಡೆಸಿ, ಚಿಕಿತ್ಸೆ, ಔಷಧ ಲಭ್ಯತೆ ಹಾಗೂ ಸಿಬ್ಬಂದಿಯ ಸೇವೆಯ ಕುರಿತು ಮಾಹಿತಿ ಪಡೆದುಕೊಂಡರು. ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ವೈದ್ಯರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಸಭೆ ಕಚೇರಿಗೆ ಭೇಟಿ ನೀಡಿ, ನಾಗರಿಕರಿಗೆ ನೀಡಲಾಗುತ್ತಿರುವ ಮೂಲಭೂತ ಸೇವೆಗಳು, ಸ್ವಚ್ಛತೆ, ಕುಡಿಯುವ ನೀರು, ತೆರಿಗೆ ಸಂಗ್ರಹ ಹಾಗೂ ಸಾರ್ವಜನಿಕ ದೂರುಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ದೂರುಗಳನ್ನು ವಿಳಂಬವಿಲ್ಲದೆ ಪರಿಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಧಿಕಾರಿಗಳ ಕಚೇರಿ ಬಾಗಿಲಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂಬ ಬೋರ್ಡನ್ನು ನೋಡಿ ತಕ್ಷಣ ತೆಗೆದು ಹಾಕಲು ತಿಳಿಸಿ, ಸಾರ್ವಜನಿಕರಿಗಾಗಿ ಕೆಲಸ ನಿರ್ವಹಿಸುವ ಅಧಿಕಾರಿ ಆಗಿರುವದರಿಂದ ಈ ರೀತಿ ಲೋಪ ಎಸಗಿದ ಅಧಿಕಾರಿಗಳ ಮೇಲೆ ಸು-ಮೋಟೋ ಪ್ರಕರಣ ದಾಳಿಸಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಅಭಿವೃದ್ದಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ ನಿಗಮಕ್ಕೆ ಭೇಟಿ ನೀಡಿ ಆಡಳಿತಾತ್ಮಕದಲ್ಲಿ ನಿರ್ಲಕ್ಷ್ಯ ಕಂಡು ಸು-ಮೋಟೊ ಪ್ರಕರಣ ದಾಖಲಿಸಿದರು.
ಭೇಟಿ ಸಮಯದಲ್ಲಿ ಉಪ ಲೋಕಾಯುಕ್ತರ ಪರ್ಸನಲ್ ಸೆಕ್ಟೇಟರಿ ಅರವಿಂದ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಓ ಗಜಾನನ ಬಾಲೆ, ಲೋಕಾಯುಕ್ತ ಇಲಾಖೆಯ ಎಸ್ಪಿ ನಂದಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಲೋಕಾಯುಕ್ತ ಇಲಾಖೆಯ ಡಿವಾಯ್ಎಸ್ಪಿ ಸುರೇಶ ರೆಡ್ಡಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಯುಪಿಐ ಆಪ್ನಲ್ಲಿ ಸಿಬ್ಬಂದಿಯ ಆರ್ಥಿಕ ವ್ಯವಹಾರ ಪರಿಶೀಲನೆ ಬಾಗಲಕೋಟೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಉಪ ಲೋಕಾಯುಕ್ತರು ಕಚೇರಿಯ ಸಿಬ್ಬಂದಿ ರಂಜಿತಾ ಮಂಗಳೂರು ಇವರ ಮೊಬೈಲ್ ಆಪ್ ಪರಿಶೀಲಿಸಿದಾಗ ಅವರ ಆದಾಯಕ್ಕಿಂತ ಹೆಚ್ಚಿನ ಆರ್ಥಿಕ ವಹಿವಾಟು ನಡೆದಿರುವುದು ಕಂಡುಬಂದಿದ್ದು, ಅವರ ೨ ವರ್ಷಗಳ ಬ್ಯಾಂಕ್ ತಃಖ್ತೆ ನೀಡುವಂತೆ ಎಸಿ ಅವರಿಗೆ ಸೂಚಿಸಲಾಯಿತು.
ತಹಶೀಲ್ದಾರ ಕಚೇರಿಯಲ್ಲಿಯೂ ಕೂಡಾ ದ್ವಿದಸ ರಾಕೇಶ ಚಲವಾದಿ ಮೊಬೈಲ್ ಪರಿಶೀಲಿಸಲಾಗಿ ಫೆಬ್ರವರಿ-೨೦೨೬ರಲ್ಲಿ ೧.೫೪ ಲಕ್ಷ, ಮಾರ್ಚನಲ್ಲಿ ೪.೮೨ ಲಕ್ಷ, ಮೇ ನಲ್ಲಿ ೩ ಲಕ್ಷ ರೂ. ಜುಲೈ ಮಾಹೆಯಲ್ಲಿ ೧.೬೯ ಲಕ್ಷ, ನವೆಂಬರ-೨೦೨೫ರಲ್ಲಿ ೨ ಲಕ್ಷ ರೂ.ಗಳ ವಹಿವಾಟು ಮಾಡಿರುವುದು ಕಂಡುಬಂದಿದೆ. ಸದರಿ ಸಿಬ್ಬಂದಿಯ ಎರಡು ವರ್ಷಗಳ ವಹಿವಾಟಿನ ಮಾಹಿತಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿ ಸು-ಮೋಟೋ ಪ್ರಕರಣ ದಾಖಲಿಸಲಾಯಿತು.