ಮೂಡಲಗಿ : ರಕ್ತ ಸಂಬಂಧ ಒಂದೊಮ್ಮೆ ಕಳೆದು ಹೋಗಬಹುದು ಆದರೆ ಗುರು-ವಿದ್ಯಾರ್ಥಿಗಳ ಅವಿನಾಭಾವ ಸಂಬಂಧ ಕೊನೆಯತನಕ ಇರುವಂತಹದು ಎಂದು ನಿವೃತ್ತ ಹಿರಿಯ ಮುಖ್ಯೋಪಾಧ್ಯಾಯರಾದ ಎಸ್.ಬಿ ತುಪ್ಪದ ಹೇಳಿದರು.
ರವಿವಾರದಂದು ತಾಲೂಕಿನ ಖಾನಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೦೫-೦೬ ನೇ ಸಾಲಿನ ಎಸ್.ಎಸ್.ಎಲ್.ಸಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ದಶಕಗಳ ನಂತರ ಗುರುಗಳು ವಿದ್ಯಾರ್ಥಿಗಳನ್ನು ಸಂಧಿಸುತ್ತಿರುವುದು ಸಂತಸ ತಂದಿದೆ ಎಂದರು.
ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಆರ್ ಮುಂಜಿ ಮಾತನಾಡಿ ಹಳೆಯ ವಿದ್ಯಾರ್ಥಿಗಳೆಲ್ಲ ಸಮಾಜದಲ್ಲಿ ಸಾಧನೆಯೊಂದಿಗೆ ನೈತಿಕತೆಯನ್ನೂ ರೂಢಿಸಿಕೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಪ್ರತಿಯೋಬ್ಬರ ಬಾಲ್ಯದ ಮೊದಲ ಗುರುಗಳಾದ ತಂದೆ-ತಾಯಿಯಾರನ್ನು ಚೆನ್ನಾಗಿ ನೋಡಿಕೊಳ್ಳವುದು ನಮ್ಮ ಆದ್ಯ ಕರ್ತವ್ಯವಾಗಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಪ ಯೋಜನಾ ನಿರ್ದೇಶಕ ಚಿಕ್ಕೋಡಿಯ ಆರ್.ಪಿ ಮಠದ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ ಹಿರೇಮಠ ಹಾಗೂ ಗುರುಗಳಾದ ಎ.ಟಿ ರೇವತಗಾಂವ್ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು. ಪ್ರಾರಂಭದಲ್ಲಿ ಗ್ರಾಮದ ಶಿವಲಿಂಗೆಶ್ವರ ದೇವಾಲಯದಿಂದ ಪ್ರೌಢ ಶಾಲೆಯ ವರೆಗೆ ಶಿಕ್ಷಣ ಕಲಿಸಿದ ಗುರುವೃಂದವನ್ನು ತೆರೆದ ವಾಹನದಲ್ಲಿ ದಾರಿಯುದ್ದಕ್ಕೂ ಪು?ರ್ಚನೆ ಮಾಡುವ ಮೂಲಕ ವಾದ್ಯ ಮೇಳ ಗಳೊಂದಿಗೆ ಸ್ವಾಗತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗುರುಗಳಾದ ಎಚ್ .ಟಿ ಅಗಸಿಮುಂದಿನ, ಎಸ್. ಎಂ ಪದಲಾಳೆ, ಸಿ.ಬಿ ಪೂಜೇರಿ, ಆರ್.ವಾಯ ನಾಯಕ, ಎಸ್.ಎ ದ್ರಾಕ್ಷಿ, ಬಿ. ವಾ ತುಕ್ಕಾನಟ್ಟಿ, ಬಸಲಿಂಗ ನಿಂಗನೂರ ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿ ಕಲ್ಲಪ್ಪ ಹೂಗಾರ ವಿದ್ಯಾರ್ಥಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಪ್ರಕಾಶ್ ರಡರಟ್ಟಿ ನಿರೂಪಿಸಿ, ಮಾಲಾ ಸಣ್ಣಶೆಟ್ಟಿ ಸ್ವಾಗತಿಸಿ, ಶಿವಲೀಲಾ ರೊಡ್ಡನವರ ವಂದಿಸಿದರು.