ರಾಮದುರ್ಗ: ಶಿಕ್ಷಕರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಆ ಸ್ಥಾನಕ್ಕೆ ಚ್ಯುತಿ ಬರದಂತೆ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಪಾಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಇದಕ್ಕಿಂತ ಪುಣ್ಯ ಬೇರೊಂದಿಲ್ಲ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸ್ಥಳೀಯ ಗುರುಭವನದಲ್ಲಿ ಮಂಗಳವಾರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಶಿಕ್ಷಕರು ಮಾಡಬೇಕೆಂದು ತಿಳಿಸಿದರು.
ತಾಲೂಕಿನ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗಿದೆ. ಸರಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಸದುಪಯೋಗ ಪಡೆಸಿಕೊಂಡು ಮಕ್ಕಳಿಗೆ ಜ್ಞಾನ ಧಾರೆ ಎರೆಯಬೇಕೆಂದು ಅವರು ಕಿವಿಮಾತು ಹೇಳಿದರು.
ವೈದ್ಯರಿಗೆ ಅವರ ಹೆಸರು ಮುಂದೆ ಡಾಕ್ಟರ್(ಡಿಆರ್) ಎಂದು ಬರೆದುಕೊಳ್ಳುವಂತೆ ಶಿಕ್ಷಕರು ತಮ್ಮ ಹೆಸರು ಮುಂದೆ ಟಿಆರ್ ಎಂದು ಬರೆದುಕೊಳ್ಳಲು ಸರಕಾರ ಆದೇಶ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹರ್ಷವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಪ್ರಾಸ್ತಾವಿಕ ಮಾತನಾಡಿ, ಗುಣಮಟ್ಟ ಶಿಕ್ಷಣ ನೀಡುವಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿವೆ. ಈ ಪಟ್ಟವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಸೇವಾ ನಿವೃತ್ತಿ ಹೊಂದಿದ ಶಿಕ್ಷಕರನ್ನು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿರುವ ಶಾಲೆಗಳ ಮುಖ್ಯಶಿಕ್ಷಕರನ್ನು ಹಾಗೂ ಸ್ಕೌಟ್ ಮತ್ತು ಗೌಡ್ಸ್ ಮುಖ್ಯಸ್ಥರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ. ಇಒ ಮಹ್ಮದಇಜಾನ್ ಸಬೂರ, ಬಿ.ಆರ್.ಸಿ ಎಸ್.ಐ ಛಾಯಪ್ಪಗೋಳ, ಜಿ.ಬಿ.ರಂಗನಗೌಡ್ರ, ಪಿ.ಡಿ.ಕಾಲವಾಡ, ಎಸ್.ವೈ.ಸನ್ನಿ, ಬಿ.ಎಸ್.ಸಂಗಣ್ಣವರ, ಎಸ್.ಬಿ.ಏಣಿ, ಎಸ್.ವಿ.ಪಾಟೀಲ, ಎಸ್.ಎಂ.ಜಾಮಾದರ, ಬಿ.ಬಿ.ಸಂಗಣ್ಣವರ, ಪಿ.ಬಿ.ಜಟಗನ್ನವರ, ಪಿ.ಜೆ.ಲಮಾಣಿ, ಎನ್.ಜಿ.ಭಜಂತ್ರಿ, ಎಂ.ಎಸ್.ಮೇಟಿ, ಈರಣ್ಣಾ ಬುಡ್ಡಾಗೋಳ, ಎಂ.ಎಸ್.ಹಗೇದಾಳ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪಾಧಿಕಾರಿಗಳು ಉಪಸ್ಥಿತರಿದ್ದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ ಸ್ವಾಗತಿಸಿದರು. ಅಶೋಕ ಬೂದಿ ಹಾಗೂ ಎಂ.ಎಸ್.ಜಂಗವಾಡ ನಿರೂಪಿಸಿದರು. ಶ್ರೀಕಾಂತ ಕರಲಿಂಗಪ್ಪನವರ ವಂದಿಸಿದರು.