ಅಥಣಿ : ದೇಶದ ಎಲ್ಲ ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠವಾದದ್ದು, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವ ಶಿಕ್ಷಕ ಮತ್ತು ಶಿಕ್ಷಕಿಯರು ಸಮಾಜದಲ್ಲಿ ಗುರುವಿನ ಸ್ಥಾನ ಪಡೆದುಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಮತ್ತು ಗುರುವಿನ ಸ್ಥಾನಕ್ಕೆ ಅತ್ಯಂತ ಶ್ರೇಷ್ಠವಾದ ಗೌರವವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಹಾಗೂ ಸಂಸ್ಕೃತ ಚಿಂತಕ ಅರವಿಂದರಾವ ದೇಶಪಾಂಡೆ ಹೇಳಿದರು.
ಅವರು ಇಲ್ಲಿನ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ನಿವೃತ್ತ ಶಿಕ್ಷಕಿ ಸರೋಜನಿ ಗೋಠೆ ಅಭಿನಂದನೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಥಣಿಯ ಇತಿಹಾಸದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಜಾಧವಜಿ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 39 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿರುವ ಸರೋಜನಿ ನರಸಿಂಹಾಚಾರ್ಯ ಗೋಠೆ ಅವರ ಶೈಕ್ಷಣಿಕ ಸೇವೆ ಅನೇಕ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಸ್ಪೂರ್ತಿಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳನ್ನು ತಿಳಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮ, ಹಾಡು ಮತ್ತು ನೃತ್ಯ, ಸಂಸ್ಕೃತ ಶ್ಲೋಕಗಳ ಮಾರ್ಗದರ್ಶನ, ರಾಮಾಯಣ ಮಹಾ ಭಾರತದ ಕಥೆಗಳನ್ನು ಹೇಳುವ ಮೂಲಕ ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ, ಅವರ ಪತಿ ವಾದಿರಾಜ ಜಂಬಗಿ ಕೈಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಚಿಂತನೆಗಳನ್ನು ನೀಡುವ ಪ್ರಯತ್ನ ಮಾಡಲಿ, ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಅನೇಕ ಶಿಕ್ಷಕರು ಮತ್ತು ಶಿಕ್ಷಕಿಯರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಥಣಿಯ ಹಿರಿಯ ಶಿಕ್ಷಕ ಆರ್ ಬಿ ದೇಶಪಾಂಡೆ ಗುರುಗಳು ಗುರು ಶಿಷ್ಯರ ಸಂಬಂಧ ಜಾತ್ಯಾತೀತ ಎಂಬುದನ್ನು ಪ್ರತಿಪಾದಿಸಿದರು ಹಾಗೂ ಸರೋಜನಿ ಗೋಠೆ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಿವೃತ್ತ ಶಿಕ್ಷಕ ಕುಂಬಾರ ಮಾಸ್ತರ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯ ಪರಂಪರೆಗೆ ಬಹಳಷ್ಟು ಮಹತ್ವ ನೀಡಲಾಗಿದೆ. ನನ್ನ ಶಿಷ್ಯ ಸರೋಜನಿ ಗೋಠೆ ಗುರುಮಾತೆಯಾಗಿ ಅನೇಕ ಮಕ್ಕಳಿಗೆೆ ಶಿಕ್ಷಣ ಮತ್ತು ಸಂಸ್ಕಾರವನ್ನು ಕರುಣಿಸಿ ಇತ್ತೀಚೆಗೆ ನಿವೃತ್ತಿದ್ದಾರೆ.ಇಂದು ಅವರ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ನಾನು ಭಾಗವಹಿಸಿ ಗುರು ವಂದನ ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಸಂತಸ ತಂದಿದೆ. ಸರೋಜನಿ ತಮ್ಮ ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಹೊಂದಿದ್ದಾರೆ.ಅವರ ಸಮಾಜಮುಖಿ ಸೇವೆ, ಒಳ್ಳೆಯ ಮಾರ್ಗದರ್ಶನ ಸಮಾಜಕ್ಕೆೆ ಇನ್ನಷ್ಟು ದೊರಕಲಿ, ಅವರ ನಿವೃತ್ತಿಯ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಸರೋಜನಿ ಗೋಠೆ ಹಾಗೂ ವಾದಿರಾಜ ಜಂಬಗಿ ದಂಪತಿಗಳಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ನಂತರ ಸರೋಜಿನಿ ಗೋಠೆ ಕುಟುಂಬದ ವತಿಯಿಂದ ತಮಗೆ ಕಲಿಸಿದ ಗುರುಗಳಿಗೆ ಸನ್ಮಾನಿಸಿ ಗುರು ವಂದನೆ ಸಲ್ಲಿಸಿದರು. ಗುರುಗಳ ಮಾರ್ಗದರ್ಶನ ಮತ್ತು ಅವರ ಕಾರ್ಯವೈಕರಿಯನ್ನ ಸ್ಮರಿಸಿ ತಮ್ಮ ಶೈಕ್ಷಣಿಕ ಸೇವೆಯ ಅನುಭವ ಹಂಚಿಕೊಂಡರು.
ಈ ಸಮಾರಂಭದಲ್ಲಿ ಆರ್ ಬಿ ದೇಶಪಾಂಡೆ, ಎ. ಆರ್ ಕುಲಕರ್ಣಿ, ಡಾ. ಆರ್ ಜಿ ಗುಡಿ, ಡಾ. ಪಿ. ಪಿ ಮಿರಜ, ಸಂದೀಪ ಸಂಗೋರಾಮ, ಸುಹಾಸ್ ದಾತಾರ, ಆನಂದ ಜಂಬಗಿ, ಗುರುರಾಜ ಜಂಬಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೋಹನ ಕುಲಕರ್ಣಿ ಸ್ವಾಗತಿಸಿದರು. ವೈಭವಿ ಕುಲಕರ್ಣಿ ನಿರೂಪಿಸಿದರು. ರಾಘವೇಂದ್ರ ಜಂಬಗಿ ವಂದಿಸಿದರು.
