ಬೈಲಹೊಂಗಲ: ಹೃದಯ ಸಂಬಂಧಿ ಕಾಯಿಲೆಗಳಿಗೆ ತ್ವರಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೈಲಹೊಂಗಲದ ವಿಹಾನ್ ಮಲಪ್ರಭಾ ಹಾರ್ಟ್ ಕೇರ್ನಲ್ಲಿ ನೂತನ ಅತ್ಯಾಧುನಿಕ ಕ್ಯಾತ್ ಲ್ಯಾಬ್ ಅನ್ನು ಮ ನಿ ಪ್ರ ಸ್ವ ನೀಲಕಂಠ ಮಹಾಸ್ವಾಮಿಗಳು ದುರದುಂಡೇಶ್ವರ ಮಠ ಮುರುಗೋಡ ಹಾಗೂ ಮ ನಿ ಪ್ರ ಸ್ವ ಪ್ರಭು ನೀಲಕಂಠ ಮಹಾಸ್ವಾಮಿಗಳು ಮೂರು ಸಾವಿರ ಮಠ ಬೈಲಹೊಂಗಲ ಅಮೃತ ಹಸ್ತದಿಂದ ಪ್ರಾರಂಭಿಸಲಾಯಿತು.
ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಹೃದಯ ಚಿಕಿತ್ಸೆಯಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ಯಾತ್ ಲ್ಯಾಬ್ ಮಹತ್ವದ ಹೆಜ್ಜೆಯಾಗಿದ್ದು, ಇನ್ನು ಮುಂದೆ ಹೃದಯ ಸಂಬಂಧಿ ತುರ್ತು ಸಂದರ್ಭಗಳಲ್ಲಿ ದೂರದ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದೆ. ಎಂದು ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಹೇಳಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ಬೈಲಹೊಂಗಲ ಹಾಗೂ ಸಮೀಪದ ತಾಲೂಕಿನ ಹಳ್ಳಿಗಳ ಜನರಿಗೆ ಈ ಆಸ್ಪತ್ರೆಯ ಅನುಕೂಲ ಸಿಗಲಿದೆ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಲು ಈ ಆಸ್ಪತ್ರೆ ಪ್ರಾರಂಭ ಆಗಿ ಕೆಲವೇ ದಿನಗಳಲ್ಲಿ ಹೃದಯ ಕಾಯಿಲೆಗೆ ಸಂಬಂದಿಸಿದ ಸೇವೆ ಈ ಭಾಗದ ಜನರಿಗೆ ಒದಗಿಸಿರುವ ವೈದ್ಯರ ಸಾಧನೆ ಅಪಾರ ಎಂದರು.
ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ ಬೈಲಹೊಂಗಲ ನಾಡಿನ ಕೀರ್ತಿ ಈ ಆಸ್ಪತ್ರೆ ಬೆಳಗಿಸಲಿ ಎಂದರು.
ಆಸ್ಪತ್ರೆಯ ಕುರಿತು ಡಾ, ಮಂಜುನಾಥ ಮುದಕನಗೌಡ್ರ, ಡಾ, ರವೀಂದ್ರ ಜಕನೂರ ಹಾಗೂ ಡಾ, ವಿಜಯ ಕೃಷ್ಣನ್ ಮಾತನಾಡಿ
ನೂತನ ಕ್ಯಾತ್ ಲ್ಯಾಬ್ನಲ್ಲಿ ಹೃದಯದ ರಕ್ತನಾಳಗಳ ತಪಾಸಣೆಗೆ ಆಂಜಿಯೋಗ್ರಾಮ್, ಅಗತ್ಯವಿದ್ದಲ್ಲಿ ಆಂಜಿಯೋಪ್ಲಾಸ್ಟಿ ಹಾಗೂ ಸ್ಟೆಂಟ್ ಅಳವಡಿಕೆ ಸೇರಿದಂತೆ ವಿವಿಧ ಹೃದಯ ಚಿಕಿತ್ಸಾ ಸೇವೆಗಳನ್ನು ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.
ವಿಶೇಷವಾಗಿ ಹೃದಯಾಘಾತದ ಸಂದರ್ಭದಲ್ಲಿ “ಸಮಯವೇ ಜೀವ” ಎಂಬುದನ್ನು ಮನಗಂಡು, ರೋಗಿಗಳಿಗೆ ತ್ವರಿತವಾಗಿ ಸೂಕ್ತ ವೈದ್ಯಕೀಯ ಸೇವೆ ದೊರಕಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲದಲ್ಲಿಯೇ ಕ್ಯಾತ್ ಲ್ಯಾಬ್ ಆರಂಭವಾಗಿರುವುದು ಈ ಭಾಗದ ಜನರಿಗೆ ವರದಾನವಾಗಿದೆ.
ವಿಹಾನ್ ಮಲಪ್ರಭಾ ಹಾರ್ಟ್ ಕೇರ್ ಸಂಸ್ಥೆಯು ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಪರಿಣಿತ ವೈದ್ಯರು ಹಾಗೂ ತರಬೇತಿ ಪಡೆದ ಸಿಬ್ಬಂದಿಯ ಸಹಕಾರದೊಂದಿಗೆ ಜನರಿಗೆ ಗುಣಮಟ್ಟದ ಹೃದಯ ಚಿಕಿತ್ಸಾ ಸೇವೆ ನೀಡುವ ಸಂಕಲ್ಪ ಹೊಂದಿದೆ.
ಕ್ಯಾತ್ ಲ್ಯಾಬ್ ಸೇವೆ ಆರಂಭಿಸಿರುವುದರಿಂದ ಬೈಲಹೊಂಗಲ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲೂಕಿನ ಜನರಿಗೆ ಸ್ಥಳೀಯವಾಗಿಯೇ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ. ಇದರಿಂದ ರೋಗಿಗಳ ಸಮಯ, ಪ್ರಯಾಣದ ವೆಚ್ಚ ಹಾಗೂ ತುರ್ತು ಸಂದರ್ಭಗಳಲ್ಲಿ ಉಂಟಾಗುವ ವಿಳಂಬವನ್ನು ತಪ್ಪಿಸಲು ಸಾಧ್ಯವಾಗಲಿದೆ.
ಬೈಲಹೊಂಗಲದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವ ವಿಹಾನ್ ಮಲಪ್ರಭಾ ಹಾರ್ಟ್ ಕೇರ್ನ ನೂತನ ಕ್ಯಾತ್ ಲ್ಯಾಬ್, ಈ ಭಾಗದ ಜನರ ಹೃದಯ ಆರೋಗ್ಯಕ್ಕೆ ಮತ್ತಷ್ಟು ಬಲ ನೀಡಲು ಹಗಲಿರುಳು ಸೇವೆಗೆ ಬದ್ದ ಎಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಚಲನಚಿತ್ರ ನಟ ಶಿವರಂಜನ ಬೊಳಣ್ಣನವರ, ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ,ಕೆ ಪಿ ಸಿ ಸಿ ಸದಸ್ಯ ರೋಹಿಣಿ ಪಾಟೀಲ, ಆಸ್ಪತ್ರೆಯ ವೈದ್ಯರಾದ ಡಾ. ಶರಣ ಅಂಗಡಿ, ಡಾ, ಅಶೋಕ ದೊಡವಾಡ,ಡಾ, ವಿಜಯಲಕ್ಷ್ಮಿ ದೊಡವಾಡ, ಡಾ, ಸಿಂಧು ಅಂಗಡಿ, ಡಾ,ಶೈಲಾ ಮುದಕನಗೌಡ್ರ,ಕವಿತಾ ಹಾಗೂ ಅನೇಕ ವೈದ್ಯರು, ಮುಖಂಡರು, ಹಿರಿಯರು, ತಾಯಂದಿರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ನಾಗರಿಕರು ಉಪಸ್ಥಿತರಿದ್ದರು.