ನೇಸರಗಿ :ನೇಸರಗಿ - ಮಲ್ಲಾಪೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಸಡಗರ ಹಾಗೂ ಸಂಭ್ರಮದಿಂದ ಉದ್ಘಾಟಿಸಲಾಯಿತು.
ಪೂಜ್ಯಶ್ರೀ ಚಿದಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕ್ರೀಡೆಯ ಮಹತ್ವದ ಕುರಿತು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ, ಶಿಸ್ತು, ಸಮಯಪಾಲನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ, ಸೋಲು–ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕ್ರೀಡೆಯು ಕೇವಲ ದೈಹಿಕ ಸಾಮರ್ಥ್ಯವನ್ನು ಬೆಳೆಸುವ ಸಾಧನವಲ್ಲ; ಅದು ಮಾನಸಿಕ ಸದೃಢತೆ, ಆತ್ಮವಿಶ್ವಾಸ, ಸಹಕಾರ, ನಾಯಕತ್ವ ಹಾಗೂ ಸ್ನೇಹಭಾವವನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಸ್ವಾಮೀಜಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ಶಿವನಗೌಡ ಪಾಟೀಲ, ಆರ್. ಬಿ. ಪಾಟೀಲ, ಚನ್ನಬಸಯ್ಯ ಪೂಜೇರಿ, ರವಿ ಹೊನ್ನಯನವರ, ಬಸವರಾಜ ಗಡೆನ್ನವರ, ಅಡಿವೆಪ್ಪ ಗುರನಗೌಡರ, ರಾಚಪ್ಪ ಬಂದ್ರಾಮ, ನೇಸರಗಿ, ಮಲ್ಲಾಪೂರ, ಮುರಕಿಭಾವಿ, ಅಂಬೇಡ್ಕರ್ ವಸತಿ ಶಾಲೆ ವನ್ನೂರು ಹಾಗೂ ವಿದ್ಯಾಮಂದಿರ ಪ್ರೌಢಶಾಲೆ ನೇಸರಗಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು,ಎಚ್ ಡಿ ಎಫ್ ಸಿ ಬ್ಯಾಂಕ ಮ್ಯಾನೇಜರ ವಿನೋದ್ ಹಾದಿಮನಿ ಹಾಗೂ ಸಿಬ್ಬಂದಿ, ವಿವಿಧ ಶಾಲೆಗಳ ಕ್ರೀಡಾಪಟು ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀಮತಿ ಮೇರಿ ಡಿಸೋಜಾ ನಿರೂಪಿಸಿದರು. ಕುಮಾರಿ ಮಹಾದೇವಿ ಸೋಮಣ್ಣವರ ಪ್ರಾರ್ಥಿಸಿದರು. ಫಕ್ಕೀರೇಶ ಹಿರೇಮಠ ಸ್ವಾಗತಿಸಿದರು. ಅಡಿವೆಪ್ಪ ದಳವಾಯಿ ವಂದಿಸಿದರು.