ಧಾರವಾಡ: ಕೊನೆ ಶ್ರಾವಣ ಸೋಮವಾರದ ಪ್ರಯುಕ್ತ ನಗರದ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ ಸಡಗರ ಮತ್ತು ಭಕ್ತಿಭಾವದಿಂದ ಜರುಗಿತು.
ಶ್ರಾವಣ ಮಾಸದ ಅಂಗವಾಗಿ ದೇವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಮಾಡಲಾಯಿತು. ವಿವಿಧ ತರಹದ ಹೂಗಳಿಂದ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನೆರವೇರಿದವು. ತಳಿರು-ತೋರಣ, ಹೂವು, ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ಸಂಜೆ 4ಗಂಟೆಗೆ ವಿಶೇಷ ಅಲಂಕೃತ ರಥದಲ್ಲಿ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಸಕಲ ವಾದ್ಯಮೇಳ, ಭಜನಾ ಮಂಡಳಿಗಳ ಜಯಘೋಷ ಮತ್ತು ಮಂಗಳವಾದ್ಯದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು `ಹರ ಹರ ಮಹಾದೇವ, ಉಳವಿ ಚನ್ನಬಸವೇಶ್ವರ ಮಹಾರಾಜ್ ಕೀ ಜೈ' ಘೋಷಣೆ ಮೊಳಗಿಸಿ ರಥದ ಹಗ್ಗ ಹಿಡಿದು ಎಳೆದರು.
ದೇವಸ್ಥಾನದಿಂದ ಹೊರಟ ರಥವು ಉಳವಿ ಚನ್ನಬಸವೇಶ್ವರ ವರ್ತುಲ ಹಾಗೂ ಹಿಂದಿ ಪ್ರಚಾರ ಸಭಾ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿ ಸಂಪನ್ನಗೊಂಡಿತು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು.
ಹೆಜ್ಜೆಮೇಳ, ಭಜನಾ ತಂಡ, ಜಗ್ಗಲಗಿ, ಕರಡಿ ಮಜಲು ಸೇರಿದಂತೆ ವಿವಿಧ ಕಲಾಮೇಳಗಳು ರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ಬೆಳಿಗ್ಗೆಯಿಂದಲೇ ಪ್ರಸಾದ ಸವಿದು ಪುನೀತರಾದರು.
ಭದ್ರತೆಗೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಯಾದವಾಡ ಆನಂದಧಾಮದ ಸಿದ್ಧಾರೂಢ ಮಠದ ಆನಂದ ಸ್ವಾಮೀಜಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್.ಆರ್. ರಾಮನಗೌಡರ, ಧರ್ಮದರ್ಶಿ ವಿಜಯೇಂದ್ರ ಪಾಟೀಲ, ಟಿ.ಎಸ್. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಸುರೇಶ ಹೆಗ್ಗೇರಿ, ಶಂಕರ ಪಾಗದ, ಸಂಜಯ ಲಕಮನಹಳ್ಳಿ, ಜಿ.ಟಿ. ಶಿರೋಳ ಪಾಲ್ಗೊಂಡಿದ್ದರು.
ಧಾರವಾಡದ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು