ರನ್ನ ಬೆಳಗಲಿ, ಆ. ೨೯: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಮುಧೋಳ ಇವರ ಸಂಯುಕ್ತ ಆಶ್ರಯದಲ್ಲಿ ರನ್ನ ಬೆಳಗಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಶುಕ್ರವಾರ ನಡೆಯಿತು.
ಕ್ರೀಡಾಕೂಟಕ್ಕೆ ಪ್ರಾಚಾರ್ಯ ಎಂ.ವಿ. ಸೊಪ್ಪಿಮಠ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, “ಬದುಕಿಗೆ ಶಿಸ್ತು ನೀಡುವ ಅಮೂಲ್ಯ ಸಾಧನವೇ ಕ್ರೀಡೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಸದೃಢ ದೇಹವಿದ್ದಾಗ ಮಾತ್ರ ಸದೃಢ ಮನಸ್ಸನ್ನು ಹೊಂದಲು ಸಾಧ್ಯ. ಆದ್ದರಿಂದ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡಬೇಕು” ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಂಗಮೇಶ ಮುಕ್ಕಾರ್ತಿಹಾಳ ಮಾತನಾಡಿ, ಪ್ರತಿಯೊಂದು ಕ್ರೀಡೆಯಲ್ಲಿಯೂ ಪ್ರಾಮಾಣಿಕತೆ ಬಹಳ ಮುಖ್ಯ. ನಿರ್ಣಾಯಕರ ತೀರ್ಪಿಗೆ ಬದ್ಧರಾಗಿ ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. “ಸೋಲೇ ಗೆಲುವಿನ ಮೆಟ್ಟಿಲು” ಎಂಬ ತತ್ವವನ್ನು ಅಳವಡಿಸಿಕೊಂಡು, ಗೆಲುವಿಗಾಗಿ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಅಗತ್ಯ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ವಿಜಯಶಾಲಿಗಳೇ ಎಂದು ಹೇಳಿದರು.
ಸಿಆರ್ಪಿಗಳಾದ ಬಸವರಾಜ ಬಳ್ಳಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆಯ ಮಹತ್ವ ಹಾಗೂ ಕ್ರೀಡಾಕೂಟದ ಆಯೋಜನೆ ಕುರಿತು ಮಾಹಿತಿ ನೀಡಿದರು. ಅಲ್ಲದೆ, ನಿರ್ಣಾಯಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ್. ಕಲ್ಲಶೆಟ್ಟಿ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಸಿಂಗ್ ಆಫೀಸರ್ ಗಜಾನಂದ ಗಾಜರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಪತ್ರಕರ್ತರಾದ ರಾಘವೇಂದ್ರ ನೀಲನ್ನವರ, ಎನ್. ಗೋಪಾಲ, ಉಪಪ್ರಾಚಾರ್ಯ ಸುರೇಶಕುಮಾರ್ ಮುದಕನ್ನವರ, ನಿಲಯ ಪಾಲಕ ಕೆ.ಎ. ಉಳ್ಳಾಗಡ್ಡಿ, ರಾಹುಲ ಸಾಗರ, ಯಲ್ಲಪ್ಪ ಶಿರಗಾಂವಿ, ವಿಲಾಸ ಎನ್ನಿ, ಎಂ.ಎಸ್. ವಿರಕ್ತಮಠ, ಗುರುಲಿಂಗಯ್ಯ ಮಠಪತಿ, ಮುತ್ತು ತೇರದಾಳ, ನಿಂಗಪ್ಪ ಜಂಗಾಲಿ, ಶಿಲ್ಪಾ ಹಾರೂಗೇರಿ ಸೇರಿದಂತೆ ಶಿಕ್ಷಕರು, ನಿರ್ಣಾಯಕರು, ಕ್ರೀಡಾಪಟುಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.