ರಾಯಬಾಗ: ತಾಲೂಕಿನ ನಿಲಜಿ ಗ್ರಾಮದಲ್ಲಿ ಕರುಣೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸೆ. 5ರಿಂದ 7ರವರೆಗೆ ನಂದಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದರು.ಶುಕ್ರವಾರ ತಾಲೂಕಿನ ನಿಲಜಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ. 5ರಂದು ಹನುಮಾನ ದೇವಸ್ಥಾನದಿಂದ ನಂದಿ ಬಸವೇಶ್ವರ ದೇವಸ್ಥಾನದವರೆಗೆ ಸುಮಂಗಲೆಯರಿಂದ ಕುಂಭಮೇಳ ಹಾಗೂ ಸಕಲ ಮಂಗಳ ವಾದ್ಯಗಳೊಂದಿಗೆ ನಂದಿ ಬಸವೇಶ್ವರರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.ಸೆ. 6 ರಂದು ಬೆಳಗ್ಗೆ 8 ಗಂಟೆಗೆ ಗೀಗಿ ಪದಗಳ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ.ಸೆ. 7ರಂದು ನಂದಿ ಬಸವೇಶ್ವರರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿ, ಧರ್ಮಧ್ವಜಾರೋಹಣ ಮಾಡಲಾಗುವುದು. ಬೆಳಗ್ಗೆ 8 ಗಂಟೆಗೆ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ನಂದಿ ಬಸವೇಶ್ವರರ ರಥೋತ್ಸವ ನೆರವೇರಿಸುವ ಮೂಲಕ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಕಲ ಸದ್ಭಕ್ತರಿಗೆ ಮೂರು ದಿನವೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಮಗೌಡ ಪಾಟೀಲ, ಮುತ್ತಪ್ಪ ಹಸರೆ, ಸದಾಶಿವ ಮಗದುಮ, ಬಸಪ್ಪ ಮಗದುಮ, ಬಸಪ್ಪ ಮಗದುಮ (ದೇವರುಷಿ), ಮಲ್ಲಪ್ಪ ನಾಗರಾಳೆ, ರಮೇಶ ಪಾಟೀಲ, ಮಾಯಗೌಡ ಪಾಟೀಲ, ಮಹದೇವ ಪಾಟೀಲ ಸೇರಿದಂತೆ ಸಮಿತಿಯ ಸದಸ್ಯರು ಇದ್ದರು.