ತಾಳಿಕೋಟೆ, ಮಗುವನ್ನು ಮಲಗಿಸಲು ಜೋಗುಳ ಹಾಡುವ ತಾಯಿಯ ಕೈ, ಅಗತ್ಯ ಬಂದಾಗ ಸಮಾಜವನ್ನು ಮುನ್ನಡೆಸುವ ಶಕ್ತಿಯನ್ನೂ ಹೊಂದಿದೆ. ತೊಟ್ಟಿಲು ತೂಗುವ ಕೈಯಲ್ಲಿಯೇ ಜಗತ್ತನ್ನೇ ಆಳುವ ಸಾಮರ್ಥ್ಯವಿದೆ ಎಂಬುದನ್ನು ತಮ್ಮ ಮಾತು ಹಾಗೂ ಕಾರ್ಯದ ಮೂಲಕ ತೋರಿಸಿಕೊಟ್ಟವರು ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಜ್ಯೋತಿ ಖೋತ್.
ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ನಡೆದ ಶಿವಶರಣೆ ಶ್ರೀ ಅಕ್ಕಮಹಾದೇವಿ ಅವರ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಿಎಸ್ಐ ಜ್ಯೋತಿ ಖೋತ್ ಅವರು, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿಕೊಳ್ಳದೆ, ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಪ್ರೇರಣಾದಾಯಕ ಸಂದೇಶ ನೀಡುವದರ ಜೊತೆಗೆ ಜೋಗೂಳ ಪದಕ್ಕೂ ಸೈ ವೀರರಾಣಿ ಕಿತ್ತೂರ ಚೆನ್ನಮ್ಮಳಾಗಲೂ ಸೈ ಎಂಬ ಮಹಿಳೆಯರಿಗಾಗಿ ನೀಡಿದ ಚೆನ್ನಮ್ಮಳ ಮಾತಿನಂತೆ ಆಡಿದ ಪ್ರೇರಣಾದಾಯಕ ಮಾತಿನ ವಿಡಿಯೋ ಎಲ್ಲಡೆ ವೈರಲ್ ಆಗುವದರ ಜೊತೆಗೆ ಮೆಚ್ಚುಗೆಗೆ ಪಾತ್ರವಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ಹೊರತಾಗಿ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವಂತಹ ವಿಚಾರಗಳನ್ನು ಸರಳವಾಗಿ, ತಮ್ಮದೇ ಜೀವನದ ಅನುಭವದೊಂದಿಗೆ ಹಂಚಿಕೊಂಡಿರುವುದು ಹಲವರ ಗಮನ ಸೆಳೆದಿದೆ. ಮಹಿಳೆ ಎಂದರೆ ಕೇವಲ ಕುಟುಂಬದ ಜವಾಬ್ದಾರಿ ಹೊರುವ ವ್ಯಕ್ತಿಯಲ್ಲ; ಆಕೆ ಕುಟುಂಬವನ್ನು ಕಟ್ಟುವ ಶಕ್ತಿ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ, ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿ ಹಾಗೂ ಅಗತ್ಯ ಬಂದಾಗ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿರುವವಳು ಎಂಬ ಸಂದೇಶವನ್ನು ಪಿಎಸ್ಐ ಜ್ಯೋತಿ ಖೋತ್ ಅವರು ವಿಶೇಷವಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮವನ್ನು ಉದಾಹರಣೆಯಾಗಿ ನೀಡಿದ ಅವರು, ಬ್ರಿಟಿಷರು ಕಿತ್ತೂರಿನ ಸಂಸ್ಥಾನಕ್ಕೆ ಕಪ್ಪ ಕೇಳಲು ಬಂದ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಅವರು ತಮ್ಮ ನಾಡಿನ ಹಕ್ಕು ಮತ್ತು ಸ್ವಾಭಿಮಾನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲಿಲ್ಲ ನಮ್ಮ ನಾಡಿನ ಮೇಲೆ ಹಕ್ಕು ಹೊಂದಿರುವ ನಾವು ಯಾರಿಗೆ ಕಪ್ಪ ಕೊಡಬೇಕು ಎಂಬ ಧೈರ್ಯದ ಮನೋಭಾವದೊಂದಿಗೆ ಬ್ರಿಟಿಷರ ವಿರುದ್ಧ ಸೆಟೆದು ನಿಂತ ಕಿತ್ತೂರು ರಾಣಿ ಚೆನ್ನಮ್ಮಳ ರೀತಿ ಕುಪಿತ ಭಾವನೆಯೊಂದಿಗೆ ಆಡಿದ ಮಾತು ನೆರೆದ ಮಹಿಳೆಯರಿಗೆ ಸ್ಪೂರ್ತಿಯ ಮಾತುಗಳಾಗಿ ಹೊರಬಂದವು.
ಅಡುಗೆ ಮನೆಗೆ ಮಹಿಳೆ ಸೀಮಿತವಾಗಬಾರದು
ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆಯನ್ನು ಕೇವಲ ಅಡುಗೆ ಮನೆ ಮತ್ತು ಕುಟುಂಬದ ಜವಾಬ್ದಾರಿಗಳಿಗೆ ಸೀಮಿತಗೊಳಿಸುವ ಮನೋಭಾವ ಎಲ್ಲೋ ಒಂದು ಕಡೆ ಮುಂದುವರಿದಿರುವುದು ವಿಷಾದನೀಯ. ಮಹಿಳೆಯರು ಶಿಕ್ಷಣ, ಆಡಳಿತ, ಪೊಲೀಸ್, ರಾಜಕೀಯ, ಉದ್ಯಮ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಪಡೆಯಬೇಕು ಮಹಿಳೆಯರು ಮುಂದೆ ಬರದಂತೆ ಮಾಡುವಂತಹ ತೆರೆಮರೆಯ ಪ್ರಯತ್ನಗಳು ನಡೆಯಬಾರದು. ಬದಲಾಗಿ, ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಕುಟುಂಬ ಮತ್ತು ಸಮಾಜ ಪ್ರೋತ್ಸಾಹ ನೀಡಬೇಕು. ಮಹಿಳೆಯೊಬ್ಬಳು ಮುಂದೆ ಬಂದಾಗ ಅದು ಕೇವಲ ಆಕೆಯ ವೈಯಕ್ತಿಕ ಸಾಧನೆಯಾಗದೆ, ಇಡೀ ಕುಟುಂಬ ಹಾಗೂ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ ಎಂದರು.
ಜೋಗುಳ ಹಾಡಿದ ಪೊಲೀಸ್ ಅಧಿಕಾರಿ
ಕಾರ್ಯಕ್ರಮದ ವೇಳೆ ಪಿಎಸ್ಐ ಜ್ಯೋತಿ ಖೋತ್ ಅವರು ಜೋಗುಳ ಪದವನ್ನು ಹಾಡುತ್ತಾ ತೊಟ್ಟಿಲು ತೂಗುವ ಮೂಲಕ ಮಹಿಳೆಯ ಬದುಕಿನ ಎರಡು ಪ್ರಮುಖ ಆಯಾಮಗಳನ್ನು ಮನಮುಟ್ಟುವಂತೆ ವಿವರಿಸಿದರಲ್ಲದೇ ತಾಯಿ ಮಗುವಿನ ತೊಟ್ಟಿಲು ತೂಗುವಾಗ ಭವಿಷ್ಯದ ಒಬ್ಬ ಉತ್ತಮ ನಾಗರಿಕನನ್ನು ರೂಪಿಸುತ್ತಾಳೆ. ಅದೇ ತಾಯಿ ವೃತ್ತಿಜೀವನಕ್ಕೆ ಕಾಲಿಟ್ಟಾಗ ಸಮಾಜದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬಲ್ಲಳು. ಆದ್ದರಿಂದ ತಾಯಿಯ ಕೈಯನ್ನು ಕೇವಲ ತೊಟ್ಟಿಲು ತೂಗುವ ಕೈ ಎಂದು ನೋಡುವ ಬದಲು, ಭವಿಷ್ಯ ನಿರ್ಮಿಸುವ ಹಾಗೂ ಸಮಾಜವನ್ನು ಮುನ್ನಡೆಸುವ ಕೈ ಎಂದು ಗುರುತಿಸಬೇಕು ಎಂಬ ಸಂದೇಶವನ್ನು ಅವರು ಸಾರಿದರು.
ನಾನು ಕೂಡ ಮನೆಯಲ್ಲಿ ಇದ್ದಾಗ ತೊಟ್ಟಿಲು ತೂಗುವ ತಾಯಿಯೇ. ಕರ್ತವ್ಯದ ಸಮಯದಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸುವ ಅಧಿಕಾರಿ. ಕುಟುಂಬದ ಜವಾಬ್ದಾರಿ ಹಾಗೂ ವೃತ್ತಿಜೀವನ ಎರಡನ್ನೂ ಸಮತೋಲನದಿಂದ ನಿರ್ವಹಿಸುವುದು ಸಾಧ್ಯ, ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.