ಹುನಗುಂದ; ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾಂಗ್ರೆಸ್ ವರಿಷ್ಠರಿಗೆ ಆತ್ಮೀಯರಾಗಿರುವ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ ಬಲಿಷ್ಠ ನಾಯಕ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಣಜಿಗ ಕ್ಷೇಮಾಭಿವೃದ್ದಿ ತಾಲೂಕಾ ಸಂಘ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಶರಣು ಬೆಲ್ಲದ ಒತ್ತಾಯಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಶಾಸಕ ಕಾಶಪ್ಪನವರ ಮತಕ್ಷೇತ್ರದಲ್ಲಿ ಈತನಕ ನಡೆದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಪಿಕೆಪಿಎಸ್ ಚುನಾವಣೆಗಳಲ್ಲಿ ಎಲ್ಲ ಸಮೂದಾಯಕ್ಕೂ ಪ್ರಾಧಾನ್ಯತೆ ನೀಡಿ ಅವರಿಗೆ ಸ್ಥಾನ ಮಾನ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದಾರೆ. ಕಳೆದ ೫ದಶಕಗಳಿಂದ ಕಾಶಪ್ಪನವರ ಮನೆತನ ಕಾಂಗ್ರೆಸ್ ಪಕ್ಷದ ನಿಷ್ಠೆಗೆ ಬದ್ದವಾಗಿ ಶಾಸಕರಾಗಿ, ಸಚಿವರಾಗಿ, ಜಿಪಂ ಅಧ್ಯಕ್ಷರಾಗಿ ಹೀಗೆ ಇಡೀ ಕುಟುಂಬವೆ ದಕ್ಷ ಆಡಳಿತ ನಡೆಸುತ್ತಾ ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸರ್ಕಾರದಲ್ಲಿ ವಿಜಯಾನಂದ ಕಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಲ್ಲದ ಆಗ್ರಹಿಸಿದರು.
ಮುಖಂಡ ಎಸ್.ಜಿ. ಎಮ್ಮಿ ಮಾತನಾಡಿ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವದರಿಂದ ೨೦೨೮ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ನಿಶ್ಚಿತವಾಗುವಲ್ಲಿ ಯಾವ ಸಂಶಯವು ಇಲ್ಲ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಸಂಘಟನೆಯಲ್ಲಿ ಕುಂಠಿತ ಅನಿವಾರ್ಯ. ಸಧ್ಯದ ಸ್ಥಿತಿಯಲ್ಲಿ ಎಲ್ಲ ಸಮೂದಾಯದ ಯುವ ಪಡೆಯನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಸಂಘಟಿಸುವಲ್ಲಿ ಕಾಶಪ್ಪನವರ ಯಶಸ್ವಿಯಾಗಿದ್ದಾರೆ ಎಂದು ಎಮ್ಮಿ ತಿಳಿಸಿದರು. ಮುಖಂಡರಾದ ಶ್ರೀ ಶ್ರೀಶೈಲ ಮತ್ತು ಶಶಿಧರ ಅಮರಾವತಿ ಮಾತನಾಡಿದರು. ಈ ವೇಳೆ ಈರಣ್ಣ ಅಂಗಡಿ, ಪ್ರಭು ಇದ್ದಲಗಿ, ಸಂಗಮೇಶ ಬಳ್ಳೋಳ್ಳಿ, ಅನ್ನದಾನಿ ಹಾದಿಮನಿ, ಸುರೇಶ ಇದ್ದಲಗಿ, ಸಿದ್ದು ಹವಾಲ್ದಾರ, ಮುತ್ತಣ್ಣ ಕಂಠಿ, ಸಿದ್ದು ಕಡತಿ ಸೇರಿದಂತೆ ಇತರರು ಇದ್ದರು.
