ಬಾಗಲಕೋಟೆ, ಜೂನ್ ೧೦ : ಮುಂಗಾರು ಮಳೆ ಪ್ರಾರಂಭವಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಅದನ್ನು ಸಮರ್ಪವಾಗಿ ಎದುರಿಸಲು ಮುಂಜಾಗ್ರತವಾಗಿ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಬಾಗಲಕೋಟೆ ಶಾಸಕ ಉಮೇಶ ಮೇಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಾ ಪಂಚಾಯತ ಸಭಾಭವನದಲ್ಲಿ ಬುಧವಾರ ಪ್ರಸಕ್ತ ಸಾಲಿನ ಪ್ರವಾಹ ಮುಂಜಾಗ್ರತಾ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷಗಳ ಪ್ರವಾಹ ಅನುಭವವನ್ನು ಗಮನದಲ್ಲಿಟ್ಟುಕೊಂಡು ಮುನ್ನಚ್ಚರಿಕೆ ಕ್ರಮ ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷ್ಣಾ ನದಿಯ ಪ್ರವಾಹ ಸಂಭವಿಸಿದರೆ, ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ೯ ಗ್ರಾಮಳು ತುತ್ತಾಗುತ್ತಿವೆ. ಈ ಗ್ರಾಮಗಳಲ್ಲಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯವಿರುವ ಪರಿಹಾರ ಕೇಂದ್ರಗಳು, ಕುಡಿಯುವ ನೀರು, ಆಹಾರ ಸಾಮಗ್ರಿ ಹಾಗೂ ಆರೋಗ್ಯ ಸೇವಗಳ ವ್ಯವಸ್ಥೆಯನ್ನು ಸಕಾಲದಲ್ಲಿ ಸಿದ್ದಪಡಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕಾ ಆಡಳಿತ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲು ತಿಳಿಸಿದ ಅವರು ಮಳೆಯ ಪ್ರಮಾಣ ಹಾಗೂ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ನಿರಂತರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.
ತಾಲೂಕಾ ವ್ಯಾಪ್ತಿಯಲ್ಲಿ ಆದ ಮಳೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕಳೆದ ೨೪ ಗಂಟೆಗಳಲ್ಲಿ ೧.೭ ಎಂಎಂ ಪೈಕಿ ೭.೮ ಎಂಎಂ ಮಳೆಯಾಗಿದೆ. ಜೂನ್ ೧ ರಇಂದ ೯ ವರೆಗೆ ೩೦.೧ ಎಂಎಂ ಪೈಕಿ ೫೩.೬ ಎಂಎಂ ದಷ್ಟು ಮಳೆಯಾಗಿದೆ. ಮಳೆಯಿಂದಾಗಿ ೫ ಮನೆಗಳು ಭಾಗಶಃ ಹಾನಿಯಾಗಿವೆ. ಒಂದು ಆಕಳು ಮೃತಪಟ್ಟಿದೆ. ಹಾನಿಗೆ ವರದಿಯನ್ನಾದರಿಸಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುತ್ತಿದೆ ಎಂದು ತಹಶೀಲ್ದಾರ ವಾಸಯದೇವ ಸ್ವಾಮಿ ಸಭೆಗೆ ತಿಳಿಸಿದರು. ಅಲ್ಲದೇ ಪ್ರವಾಹ ಸಂದರ್ಭದಲ್ಲಿ ಮೇವು ಲಭ್ಯತೆ, ಅಗ್ನಿಶಾಮಕ ದಳ ಸಕ್ರಿಯವಾಗಿದೆ. ದಿನ ೨೪ ಗಂಟೆಗಳ ಕಾಲ ಸಹಾಯವಾಣಿ ಕೇಂದ್ರವನ್ನು (೦೮೩೫೪-೨೩೬೨೪೦) ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ನಂತರ ಮತಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಬಗ್ಗೆ ಚರ್ಚೆ ಮಾಡಿದ ಅವರು ರಾಂಪೂರ, ನೀರಲಕೇರಿ, ಬೆಣ್ಣೂರ, ಗುಳಬಾಳ ಶಿರಗುಪ್ಪಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆ ಬಗೆಹಿಸುವ ಕೆಲಸವನ್ನು ಅಧಿಕಾರಿಗಳು ತುರ್ತಾಗಿ ಮಾಡಬೇಕು. ಅಗತ್ಯವಿದ್ದಲ್ಲಿ ಹೊಸ ಬೋರವೆಲ್ ಸಹ ಕೊರೆಯಿಸಲು ಸೂಚಿಸಿದರು. ಪೈಪನೈಲ್ ದುರಸ್ಥಿ ಇದ್ದಲ್ಲಿ ತಕ್ಷಣ ಕ್ರಮವಹಿಸಲು ತಿಳಿಸಿದರು.
ನಂತರ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಿಶು ಅಭಿವೃದ್ದಿ ಯೋಜನೆ, ಸಹಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಸಭೆಗೆ ಗೈರು ಹಾಜರಾದ ಹೆಸ್ಕಾಂ ಅಧಿಕಾರಿಗೆ ನೋಟಿಸ್ ನೀಡಲು ತಿಳಿಸಿದರು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಅಭಿವೃದ್ದಿ ಕೆಲಸಗಳಿಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ. ಕೆಲಸದಲ್ಲಿ ಆಸಕ್ತಿ ಇಲ್ಲದವರು ವರ್ಗಾವಣೆ ಮಾಡಿಕೊಂಡು ಬೇರೆಡೆ ಹೋಗುವಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಿಗೆ ತಹಶೀಲ್ದಾರ ಕಾರ್ಯಾಲಯ ಹಾಗೂ ತಾಲೂಕಾ ಪಂಚಾಯತ ವತಿಯಿಂದ ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಆಗಿರುವ ತಾ.ಪಂ ಆಡಳಿತಾಧಿಕಾರಿ ಟಿ.ಎಸ್.ರುದ್ರೇಶಪ್ಪ, ಬಾಗಲಕೋಟೆ ತಹಶೀಲ್ದಾರ ವಾಸುದೇವ ಸ್ವಾಮಿ, ಹುನಗುಂದ ತಹಶೀಲ್ದಾರ ಪ್ರದೀಪ ಹಿರೇಮಠ, ಬಾಗಲಕೋಟೆ ತಾ.ಪಂ ಇಓ ಸುಭಾಷ ಸಂಪಗಾವಿ, ಹುನಗುಂದ ತಾ.ಪಂ ಇಓ ಮುರಳಿಧರ ದೇಶಪಾಂಡೆ ಸೇರಿದಂತೆ ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳು ತಾ.ಪಂ ಲೆಕ್ಕಾಧಿಕಾರಿ ರಾಜೇಶ ಚೌಧರಿ ಉಪಸ್ಥಿತರಿದ್ದರು.
