ಬಳ್ಳಾರಿ, ಜೂ.09: ಬಳ್ಳಾರಿ ನಗರದಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶೀಘ್ರ ಉದ್ಘಾಟಿಸಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ಬಳ್ಳಾರಿಯ 14ನೇ ವಾರ್ಡಿನಲ್ಲಿ ಸಲಾಂ ಬಳ್ಳಾರಿ ಹಾಗೂ ಕಿಚನ್ ಕಿಟ್ ವಿತರಣೆಗೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಡಿಗಿ ಚನ್ನಪ್ಪ ವೃತ್ತ, ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಸೇರಿದಂತೆ ಈವರೆಗೆ ಪೂರ್ಣಗೊಂಡಿರುವ ರಸ್ತೆ ಮತ್ತಿತರ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಅಲ್ಲದೇ ಶಾಶ್ವತ ಕುಡಿಯುವ ನೀರಿನ ಯೋಜನೆಯ 270 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾಥಮಿಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದ ಅವರು, ಪ್ರತಿ ವಾರ್ಡಿಗೆ ತಲಾ 2.50 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಬಳ್ಳಾರಿಯ ಒಳ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಅಂಡರ್'ಪಾಸ್ ನಿರ್ಮಾಣ ಆಗಿ ಒಂದು ವರ್ಷದಲ್ಲಿ ಬಹಳ ಸಲ ಮಳೆ ಆಗಿದೆ, ಆಗ ಅಂಡರ್'ಪಾಸಿನಲ್ಲಿ ನೀರು ನಿಂತಿರಲಿಲ್ಲ, ಅದನ್ನು ಯಾರೂ ಹೇಳಲಿಲ್ಲ, ಆದರೆ ಮೊನ್ನೆ ಬಂದ ಮಳೆ ಭೀಕರವಾಗಿತ್ತು, ಆದಾಗ್ಯೂ ನೀರು ನಿಲ್ಲಬಾರದು; ನಿಂತವು, ಅದನ್ನೇ ವಿರೋಧ ಪಕ್ಷದವರು ದೊಡ್ಡದು ಮಾಡಿದ್ದಾರೆ ಎಂದರು.
ಮಳೆಯಿಂದ ಈ ಬಾರಿ ಭಾರೀ ಪ್ರಮಾಣದ ಹಾನಿಯಾಗಿದೆ, ಪಾಲಿಕೆಯ ಅಧಿಕಾರಿಗಳು, ಜೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ವಿದ್ಯುತ್ ಸಂಪರ್ಕದ ಮಾರ್ಗಗಳು, ಕಂಬಗಳು ಹಳತಾಗಿವೆ, ಶೀಘ್ರ ಬದಲಿಸಲಾಗುವುದು ಎಂದರು.
ಈ ಸಂದರ್ಭ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಬಿಆರೆಲ್ ಸೀನಾ, ಮಹಿಳಾ ಘಟಕದ ಮಂಜುಳಾ, ಪದ್ಮಾ, ಥಿಯೇಟರ್ ಶಿವು, ರಾಕಿ ಮತ್ತಿತರರು ಹಾಜರಿದ್ದರು.
