ಬೀಳಗಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರವೇ ತಲುಪುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.
ತಾಲ್ಲೂಕಾ ಗ್ಯಾರಂಟಿ ಸಭಾ ಭವನದಲ್ಲಿ ಮಂಗಳವಾರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚುವ ಕೆಲಸ ರಾಜ್ಯದಾದ್ಯಂತ ನಡೆಯುತ್ತಿದೆ ಎಂದರು.
ಮೃತವ್ಯಕ್ತಿಗಳ ಹೆಸರಿನಲ್ಲಿಯೂ ಸಹ ಕೆಲವರು ಹಣ ಪಡೆಯುತ್ತಿರುವುದು ಈಗಾಗಲೆ ಪತ್ತೆಯಾಗಿದೆ. ಜಿಎಸ್ಟಿ ತೆರಿಗೆ ಪಾವತಿದಾರರು, ಶ್ರೀಮಂತರೂ ಸಹ ಯೋಜನೆ ಲಾಭ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆ ದುರುಪಯೋಗ ತಡೆಯಲು ಅಧಿಕಾರಿಗಳು ಹಾಗೂ ನೌಕರರು ಮನೆಮನೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸರ್ಕಾರ ಆದೇಶ ಜಾರಿಗೊಳಿಸಿದೆ. ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಅನುಷ್ಠಾನಕ್ಕೆ ತರುವ ಗುರುತರ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಫಲಾನುಭವಿಗಳು ಕರ್ನಾಟಕದ ನಿವಾಸಿ ಆಗಿರಬೇಕು.ಬೇರೆ ರಾಜ್ಯದ ನಿವಾಸಿಗಳು ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದರೆ ಅಂತವರನ್ನು ಗುರುತಿಸಿ ಅನರ್ಹಗೊಳಿಸಬೇಕು ಎಂದು ತಿಳಿಸಿದರು.
'ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ 736 ಮೃತಪಟ್ಟ ಪ್ರಕರಣಗಳು ಪತ್ತೆಯಾಗಿದ್ದು, ಅಂತಹ ಅನರ್ಹ ಖಾತೆಗಳನ್ನು ಗುರುತಿಸಿ ಯೋಜನೆಗಳ ಪರಿಷ್ಕರಣೆ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ. ಕವಟೇಕರ ಹೇಳಿದರು.
'ಗೃಹಜ್ಯೋತಿ ಯೋಜನೆಯಡಿ ಕೆಲವೆಡೆ ಗೃಹ ಬಳಕೆಯ ಹೆಸರಿನಲ್ಲಿ ವಾಣಿಜ್ಯ ಬಳಕೆ ಮಾಡುತ್ತಿರುವುದು ಕೇಳಿ ಬರುತ್ತಿದ್ದು ಅಂತಹ ಪ್ರಕರಣಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸ್ಕಾಂ ವಿಭಾಗದ ಎಇಇ ಮಂಜುನಾಥ ಬೋಕಿ ಸಭೆಗೆ ತಿಳಿಸಿದರು.
ಆಹಾರ ಇಲಾಖೆಯ ಎ.ಎಲ್.ಸನದಿ, ಸಾರಿಗೆ ಇಲಾಖೆಯ ಮಾಹಾಂತೇಶ ಬಿರಾದಾರ ಸಭೆಗೆ ಇಲಾಖೆಗಳ ಮಾಹಿತಿ ಒದಗಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಹನಮಂತ ಸೂಳಿಕೇರಿ, ರಸೂಲ್ ಮುಜಾವರ,ಚಂದ್ರಶೇಖರ ಪಂಡರಿ, ಎಂ.ಆರ್. ಪಾಟೀಲ, ವೆಂಕನಗೌಡ ಪಾಟೀಲ,ನಾರಾಯಣ ಕಂಬಾರ,ಮುತ್ತು ಲಮಾಣಿ, ಸದಾಶಿವ ಜುಂಜೂರಿ, ರೇಖಾ ಕಟ್ಟೆಪ್ಪನವರ ಇದ್ದರು.
ಬೀಳಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹಾಗೂ ಸದಸ್ಯರು ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
