ತಾಳಿಕೋಟೆ, ಮಳೆ ಕೊರತೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತಾಳಿಕೋಟೆ, ದೇವರ ಹಿಪ್ಪರಗಿ, ಮುದ್ದೇಬಿಹಾಳ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ರೈತರು ಕಳೆದ ಒಂಬತ್ತು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ನ್ಯಾಯವಾದಿ ಪ್ರಭಾಕರ ಗುಡಗುಂಟಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ೯ನೇ ದಿನದ ಅಹೋರಾತ್ರಿ ಧರಣಿ ಸ್ಥಳಕ್ಕೆ ತಾಲೂಕಿನ ಎಲ್ಲ ನ್ಯಾಯವಾದಿಗಳು ಆಗಮಿಸಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ನಂತರ ಮಾತನಾಡುತ್ತಿದ್ದ ಅವರು ರೈತರು ತಮ್ಮ ಕುಟುಂಬ ಹಾಗೂ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಹಗಲು-ರಾತ್ರಿ ಧರಣಿ ನಡೆಸುತ್ತಿರುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಬಂದಿದೆ ಆದರೂ ಸ್ಪಂದಿಸದಿರುವದು ಸರಿಯಲ್ಲಾವೆಂದು ಹೇಳಿದ ಅವರು ರೈತರ ಜಮೀನುಗಳಲ್ಲಿನ ವಾಸ್ತವ ಪರಿಸ್ಥಿತಿ, ಬೆಳೆಗಳ ಸ್ಥಿತಿ ಹಾಗೂ ಕೃಷಿಗಾಗಿ ಮಾಡಿರುವ ಬಂಡವಾಳದ ನಷ್ಟವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ರೈತರು ವೈಯಕ್ತಿಕ ಹಿತಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಇಡೀ ರೈತ ಸಮುದಾಯದ ಪರವಾಗಿ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ರೈತರ ಹೋರಾಟಕ್ಕೆ ಯಾವುದೇ ಜಾತಿ, ಪಕ್ಷ ಅಥವಾ ವೈಯಕ್ತಿಕ ಭೇದವಿಲ್ಲ. ರೈತ ಎಂಬುದೇ ನಮ್ಮ ಏಕೈಕ ಗುರುತು. ರೈತರು ತಮ್ಮ ಕುಟುಂಬವನ್ನು ಬಿಟ್ಟು ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಅವರ ನೋವು ಮತ್ತು ಸಂಕಷ್ಟವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದ ನ್ಯಾಯವಾದಿ ಪ್ರಭಾಕರ ಗುಡಗುಂಟಿ ಅವರು ಜನಪ್ರತಿನಿಧಿಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರೈತರ ಪರವಾಗಿ ಧ್ವನಿ ಎತ್ತಬೇಕು. ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ತಾಳಿಕೋಟೆ ಹಾಗೂ ದೇವರಹಿಪ್ಪರ-ಮುದ್ದೇಬಿಹಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಒಂಬತ್ತು ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಸಂಪೂರ್ಣವಾಗಿ ಎಲ್ಲ ರೀತಿಯಿಂದ ನ್ಯಾಯವಾದಿಗಳು ಬೆಂಬಲ ನಿಡುತ್ತಿದ್ದೇವೆ ಮುಂದಿನ ದಿನಗಳಲ್ಲಿಯೂ ರೈತರ ನ್ಯಾಯಯುತ ಹೋರಾಟಕ್ಕೆ ಅಗತ್ಯ ಬೆಂಬಲ ನೀಡಲಾಗುವುದು. ರೈತರ ಬೇಡಿಕೆ ಈಡೇರುವವರೆಗೆ ಅವರೊಂದಿಗೆ ನಿಂತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆಂದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎಂ.ಆರ್. ಪಾಟೀಲ, ಎಸ್.ಬಿ. ನಾರಿ, ಎಸ್.ಎಂ. ಕಿಣಗಿ, ಶ್ರೀಶೈಲ ಹಾಲಣ್ಣವರ, ಕಾಶೀನಾಥ ಕಟ್ಟಿಮನಿ, ಸಂತೋಷ ಯಲಗೋಡ, ಚಂದ್ರು ಛಲವಾದಿ, ಆರ್.ಎನ್.ಪಾಟೀಲ, ಬಸವರಾಜ ಕಟ್ಟಿಮನಿ, ಎಂ.ಬಿ.ಅಸ್ಕಿ, ಹಾಗೂ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಮಲ್ಲನಗೌಡ ಬಿರಾದಾರ, ನಾನಾಗೌಡ ಮುದುನೂರ, ಮಾಂತಗೌಡ ಮುದುನೂರ, ಹನುಮಂತರಾಯ ಹಾಲರಡ್ಡಿ, ಬಸನಗೌಡ ಬನ್ನೆಪ್ಪ, ಶಿವರಾಜ ಪಾಟೀಲ, ಬಸನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಅರುಣಕುಮಾರ ಬಿರಾದಾರ, ಸಂಗನಗೌಡ ಟಕ್ಕಳಕಿ, ಬಸನಗೌಡ ಟಕ್ಕಳಕಿ, ರಾಮನಗೌಡ ಟಕ್ಕಳಕಿ, ಸೋಮನಗೌಡ ಯಳವಾರ, ಅಣ್ಣಪ್ಪಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.