ಬಳ್ಳಾರಿ,ಜೂ.10 ಭೂಮಿ ಮತ್ತು ಕೃಷಿ ಪದ್ಧತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಡುಗೊರೆಯಾಗಿ ನೀಡಲು ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಮುಖ ಮಾಡಬೇಕು ಎಂದು ಉಪ ಕೃಷಿ ನಿರ್ದೇಶಕ ಮಂಜುನಾಥ್ ಅವರು ಕರೆ ನೀಡಿದರು.
ಕೃಷಿ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವಿಕೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ರೈತರಲ್ಲಿ ವ್ಯಾಪಕ ಅರಿವು ಮೂಡಿಸಲು ಆತ್ಮ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಮೋಕಾ, ಬೆಳಗಲ್ಲು ಗ್ರಾಮದಲ್ಲಿ ಆಯೋಜಿಸಿದ್ದ ‘ಧರ್ತಿ ಮಾತಾ ಬಚಾವೋ, ಖೇತಿ ಬಚಾವೋ’ ಆಂದೋಲನ ಮತ್ತು ರೈತರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ ನಮ್ಮ ಭೂಮಿ (ಧರ್ತಿ ಮಾತಾ) ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿಯಲ್ಲಿ ಯಶಸ್ಸು ಕಾಣಲು ಕಡ್ಡಾಯವಾಗಿ ಅಧಿಕೃತ ಮಾರಾಟಗಾರರಿಂದ ಅಥವಾ ಕೃಷಿ ಇಲಾಖೆಯಿಂದ ದೃಢೀಕೃತ ಬಿತ್ತನೆ ಬೀಜಗಳನ್ನೇ ಖರೀದಿಸಬೇಕು ಮತ್ತು ಖರೀದಿಸುವಾಗ ರಶೀದಿಯನ್ನು ತಪ್ಪದೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಮಾತನಾಡಿ, ರೈತರು ಕೇವಲ ಯೂರಿಯಾ ಅಥವಾ ಡಿ.ಎ.ಪಿ ಗೊಬ್ಬರಗಳನ್ನೇ ಅತಿಯಾಗಿ ಬಳಸುವುದನ್ನು ನಿಲ್ಲಿಸಬೇಕು. ಬೆಳೆಗಳಿಗೆ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಜೊತೆಗೆ ಲಘು ಪೋಷಕಾಂಶಗಳೂ ಅತ್ಯಗತ್ಯವಾಗಿದ್ದು, ಮಣ್ಣಿನ ಪರೀಕ್ಷಾ ವರದಿಗೆ ಅನುಗುಣವಾಗಿ ಸಮತೋಲನ ಪ್ರಮಾಣದಲ್ಲಿ ರಸಗೊಬ್ಬರ ಬಳಸುವುದರಿಂದ ಅನಗತ್ಯ ವೆಚ್ಚ ಕಡಿಮೆಯಾಗಿ, ಇಳುವರಿ ಹೆಚ್ಚುತ್ತದೆ ಎಂದು ತಿಳಿಸಿದರು.
ರಸಗೊಬ್ಬರ ಖರೀದಿಯಲ್ಲಿ ಪಾರದರ್ಶಕತೆ ತರಲು ಮತ್ತು ಸಬ್ಸಿಡಿ ಗೊಬ್ಬರ ದುರುಪಯೋಗ ತಡೆಯಲು ಇನ್ನು ಮುಂದೆ ಯೂರಿಯಾ ಸೇರಿದಂತೆ ಯಾವುದೇ ರಾಸಾಯನಿಕ ಗೊಬ್ಬರ ಖರೀದಿಗೆ ರೈತರ ಗುರುತಿನ ಸಂಖ್ಯೆ ಅಥವಾ ಎಫ್.ಐ.ಡಿ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಇದುವರೆಗೆ ‘ಫ್ರೂಟ್ಸ್' ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳದ ರೈತರು ತಕ್ಷಣವೇ ತಮ್ಮ ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್ಐಡಿ ಪಡೆದುಕೊಳ್ಳುವಂತೆ ಕೋರಿದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಪಾಲಯ್ಯ ಅವರು ಮಾತನಾಡಿ, ಪರಿಸರಕ್ಕೆ ಹಾನಿ ಮಾಡದಂತೆ ದೀರ್ಘಾವಧಿಯಲ್ಲಿ ಲಾಭ ತಂದುಕೊಡುವ ಕೃಷಿಯೇ ಸುಸ್ಥಿರ ಕೃಷಿ. ಇದಕ್ಕಾಗಿ ಬೆಳೆ ಪರಿವರ್ತನೆ, ಅಂತರ್ ಬೆಳೆ ಪದ್ಧತಿ, ಹಸಿರುಗೊಬ್ಬರಗಳ ಬಳಕೆ ಮತ್ತು ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ರೈತರಿಗೆ ತಿಳಿಸಿದರು.
ಕೆ.ವಿ.ಕೆ ಹಗರಿಯ ಮಣ್ಣು ವಿಜ್ಞಾನಿ ಡಾ.ರವಿ ಎಸ್. ಅವರು ಮಾತನಾಡಿ, ಬಿತ್ತನೆಗೆ ಮುನ್ನ ಬೀಜಗಳಿಗೆ ಜೈವಿಕ ಇನಾಕ್ಯುಲಂಗಳು ಅಥವಾ ಶಿಲೀಂಧ್ರನಾಶಕಗಳಿAದ ಉಪಚರಿಸುವುದರಿಂದ ಆರಂಭಿಕ ಹಂತದ ರೋಗ ಮತ್ತು ಕೀಟ ಬಾಧೆಗಳನ್ನು ತಡೆಯಬಹುದು ಹಾಗೂ ಇದು ಮೊಳಕೆ ಒಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.
ಭೂಮಿಯ ಆರೋಗ್ಯ ಕಾಪಾಡಲು ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ ಹಾಗೂ ಹಸಿರುಗೊಬ್ಬರಗಳಾದ ಸೆಣಬು, ಡಯಾಂಚಾಗಳನ್ನು ಮಣ್ಣಿಗೆ ಸೇರಿಸಬೇಕು ಮತ್ತು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಿ ‘ಮಣ್ಣಿನ ಆರೋಗ್ಯ ಕಾರ್ಡ್' ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದರು.
ಬಳ್ಳಾರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂತೋಷ್ ಅವರು, ಇಲಾಖೆಯ ಪ್ರಮುಖ ಯೋಜನೆಗಳಾದ ಪಿಎಂ-ಕಿಸಾನ್, ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಯೋಜನೆ, ರೈತ ಶಕ್ತಿ ಯೋಜನೆ (ಡೀಸೆಲ್ ಸಬ್ಸಿಡಿ), ಕೃಷಿ ಯಾಂತ್ರೀಕರಣ ಯೋಜನೆಯಡಿ ಟ್ರಾö್ಯಕ್ಟರ್ ಮತ್ತು ಉಪಕರಣಗಳ ವಿತರಣೆ ಹಾಗೂ ಸೂಕ್ಷö್ಮ ನೀರಾವರಿ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿಗೆ ಶೇ. 75 ರಿಂದ ಶೇ. 90 ರವರೆಗೆ ನೀಡಲಾಗುವ ಸಹಾಯಧನದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಂಪ್ಲಿಯ ಕೃಷಿ ಅಧಿಕಾರಿ ಯೇಸುಬಾಬು ಅವರು ಮಾತನಾಡಿ, ಕಂಪ್ಲಿ ಮತ್ತು ಸುತ್ತಮುತ್ತಲಿನ ಭಾಗದ ರೈತರು ತಮ್ಮ ಜಮೀನಿನ ಮಣ್ಣಿನ ಗುಣಮಟ್ಟ ಸುಧಾರಿಸಲು ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಕಂಪ್ಲಿಯ ತರಬೇತಿ ಕೇಂದ್ರವನ್ನು ನೇರವಾಗಿ ಸಂಪರ್ಕಿಸಿ ಉಚಿತ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರಾದ ಕವಿತಾ ಕುಮಾರಿ ಅವರು ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಳಸಿ, ದೇಸಿ ತಳಿಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ರೈತರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿಯಾದ ಸುಷ್ಮಾ ಅವರು ತಿಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಜ್ಯೋತಿ, ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕಿ ವಾಣಿ ಕೋರಪ್ಪಳ ಹಾಗೂ ಕೃಷಿ ಸಂಜೀವಿನಿ ಸಿಬ್ಬಂದಿಗಳು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮದ ನೂರಾರು ರೈತರು ತಮ್ಮ ಕೃಷಿ ಸಂಬAಧಿತ ಸಂಶಯಗಳನ್ನು ತಜ್ಞರ ಮುಂದೆ ಮಂಡಿಸಿ ಪರಿಹರಿಸಿಕೊಂಡರು.
