ಬೈಲಹೊಂಗಲ: ಕಳೆದ 2021ರಿಂದ ಬೈಲಹೊಂಗಲ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ದಳವಾಯಿ ಅವರು ಚಿಕ್ಕೋಡಿ ತಾಲೂಕಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಹಾಗೂ ತಾಲೂಕಾಧ್ಯಕ್ಷ ಗುರು ಮೆಟಗುಡ್ಡ ಅವರ ನೇತೃತ್ವದಲ್ಲಿ ದಳವಾಯಿ ಅವರನ್ನು ಗೌರವಯುತ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುರು ಮೆಟಗುಡ್ಡ ಅವರು, ಬಸವರಾಜ ದಳವಾಯಿ ಅವರು ಬೈಲಹೊಂಗಲದಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ರೈತರಿಗೆ ತಲುಪುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ರೈತ ಸ್ನೇಹಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿರುವ ಅವರ ಕಾರ್ಯವನ್ನು ಶ್ಲಾಘಿಸಿ, ಮುಂದಿನ ಸೇವಾವಧಿಗೆ ಶುಭ ಹಾರೈಸಿದರು.
ಬಸವರಾಜ ದಳವಾಯಿ ಮಾತನಾಡಿ ಬೈಲಹೊಂಗಲದಲ್ಲಿ ತಮಗೆ ದೊರೆತ ಸಹಕಾರ ಹಾಗೂ ಪ್ರೀತಿಗೆ ಕೃತಜ್ಞತೆ ಸಲ್ಲಿಸಿ, ಚಿಕ್ಕೋಡಿಯಲ್ಲಿ ತಮ್ಮ ಮುಂದಿನ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಶಂಕರ ಸುಣಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅನ್ನಪ್ಪ ಅರಳಿಕಟ್ಟೈ, ರೈತ ಮುಖಂಡರಾದ ಶಿವಾನಂದ ಇಂಚಲ, ಮಲ್ಲಿಕಾರ್ಜುನ ಹುಂಬಿ, ನಗರ ಘಟಕ ಅಧ್ಯಕ್ಷ ಶಂಕರ ಕಡಕೋಳ, ಗ್ರಾಮೀಣ ಘಟಕ ಅಧ್ಯಕ್ಷ ಶಿವಬಸಪ್ಪ ಮದ್ನಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕರಯ್ಯ ಕುಲಕರ್ಣಿ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
