ಬಳ್ಳಾರಿ, ಜೂ.18: ಕಲೆ, ನಾಟಕ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಇಂತಹ ಕಾರ್ಯಕ್ರಮಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ಅವರು ನಿನ್ನೆ ರಾತ್ರಿ ಕುರುಗೋಡು ತಾಲೂಕಿನ ಡಿ.ಕಗ್ಗಲ್ಲು ಗ್ರಾಮದಲ್ಲಿ ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸಾಂಸ್ಕೃತಿಕೋತ್ಸವ–2026” ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕೋತ್ಸವವನ್ನು ಹಮ್ಮಿಕೊಳ್ಳುವ ಮೂಲಕ. ರಂಗ ಜಂಗಮ ಸಂಸ್ಥೆಯು ಎಲ್ಲ ಕಲಾವಿದರಿಗೂ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದರು.
ಪತ್ರಕರ್ತ ಕೆ.ಎಂ. ಮಂಜುನಾಥ ಮಾತನಾಡಿ, “ಅನೇಕ ಪ್ರತಿಭಾವಂತ ಕಲಾವಿದರನ್ನು ರಂಗಭೂಮಿಗೆ ನೀಡಿದ ಹೆಗ್ಗಳಿಕೆ ಬಳ್ಳಾರಿ ಜಿಲ್ಲೆಗೆ ಸಲ್ಲುತ್ತದೆ. ನಮ್ಮ ಗ್ರಾಮದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀಧರಗಡ್ಡೆಯ ಸಾ.ಹಿ. ಪ್ರೌಢಶಾಲೆಯ ಮುಖ್ಯಗುರು ಎ. ಮಲ್ಲಪ್ಪ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಯಾಗಲಿ” ಎಂದು ಆಶಿಸಿದರು. ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆಲಂಬಾಷ, ಶಿಕ್ಷಕರಾದ ಗಾದಿಲಿಂಗಪ್ಪ ಹಾಗೂ ನೃತ್ಯಗುರು ಅಭಿಷೇಕ್ ಉಪಸ್ಥಿತರಿದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳ್ಳಾರಿಯ .ಸಿ. ಸುಂಕಣ್ಣ ಮತ್ತು ತಂಡದಿಂದ ಸಮೂಹ ನೃತ್ಯ, ಹುಲಿಗೆಮ್ಮ ಮತ್ತು ತಂಡದಿಂದ ತೋಗಲುಗೊಂಬೆ ಆಟ, ಎಸ್.ಎಂ. ಹುಲುಗಪ್ಪ ಮತ್ತು ತಂಡದಿಂದ ಜಾಗೃತಿ ಗೀತೆಗಳು, ಸಿಂದಗೇರಿಯ ವಿನಯ್ ಮತ್ತು ತಂಡದಿಂ ಸುಗಮ ಸಂಗೀತ, ಕುರುಗೋಡಿನ ವಿಜಯಕುಮಾರ್ ಮತ್ತು ತಂಡದಿಂದ ಜಾನಪದ ಡೊಳ್ಳು ಕುಣಿತ, ಹೂವ೮ನಹಡಗಲಿಯ ಪ್ರಕಾಶ್ ಎಂ. ಮತ್ತು ತಂಡದಿಂದ ರಂಗಗೀತೆಗಳು, ಅದೇ ಗ್ರಾಮದ .ಎಂ. ಸದಾನಂದ ಸ್ವಾಮಿ ಮತ್ತು ತಂಡದಿಂದ ತತ್ವಪದಗಳ ಗಾಯನ, ಸಿರಿಗೇರಿಯ ಎನ್. ಸುಮಂಗಲ ಮತ್ತು ತಂಡದಿಂದ ಪೌರಾಣಿಕ ಹಾಸ್ಯ ನಾಟಕ “ಶ್ರೀಕೃಷ್ಣ ಸಂಧಾನ” ಪ್ರದರ್ಶನಗೊಂಡವು.
ವೀರೇಶ್ ಮತ್ತು ತಂಡ ಪ್ರಾರ್ಥನೆ. ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಷ್ಣು ಹಡಪದ ಕಾರ್ಯಕ್ರಮವನ್ನು ನಿರೂಪಿಸಿದರು.
