ಜಮಖಂಡಿ: ನಗರದ ರಹಮತ್ ನಗರದ ಓಣಿ ಫ್ಲಾಟ್ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆ ಹಾಗೂ ಸಂಚಾರಕ್ಕೆ ಅಡ್ಡಿಯಾಗಿದ್ದ ಅತಿಕ್ರಮಣ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ರಸ್ತೆ ನಿರ್ಮಾಣ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದ ಸುಮಾರು 7–8 ಮನೆಗಳ ಅತಿಕ್ರಮಣವನ್ನು ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಹಲವು ವರ್ಷಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಅತಿಕ್ರಮಣಗಳ ವಿರುದ್ಧ ನಗರಸಭೆ ಕ್ರಮ ಕೈಗೊಂಡಿದೆ.
ಪೌರಾಯುಕ್ತೆ ಜ್ಯೋತಿ ಗಿರೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರಸಭೆಯ ಆರ್ ಒ, ಯಲ್ಲಪ್ಪ ಬಿದರಿ, ಅಭಿಯಂತರರಾದ ಕುಸುಮಾ ಸೋಪಡ್ಲಾ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಕುರಿತು ಪೌರಾಯುಕ್ತ ಜ್ಯೋತಿ ಗಿರೀಶ್ ಮಾತನಾಡಿ, ರಹಮತ್ ನಗರದ ಓಣಿ ಫ್ಲಾಟ್ ಪ್ರದೇಶದಲ್ಲಿ ನಗರಸಭೆಯ ರಸ್ತೆಯ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೂ ಹಾಗೂ ಸಾರ್ವಜನಿಕರ ಸಂಚಾರಕ್ಕೂ ಅತಿಕ್ರಮಣದಿಂದ ತೊಂದರೆಯಾಗಿತ್ತು. ಈಗಾಗಲೇ ಸ್ಥಳದ ಅಳತೆ ಮಾಡಿಸಿ, ಅತಿಕ್ರಮಣವಾಗಿರುವ ಜಾಗವನ್ನು ಸಂಬಂಧಪಟ್ಟವರಿಗೆ ತೋರಿಸಿ, ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳುವಂತೆ ಮುಂಚಿತವಾಗಿ ಸೂಚಿಸಲಾಗಿತ್ತು. ಆದರೆ ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರಸಭೆಯಿಂದಲೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳು, ಶೆಡ್ಗಳು ಮತ್ತು ಕಂಪೌಂಡ್ಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು. ಪಾದಚಾರಿ ಮಾರ್ಗ ಹಾಗೂ ನಗರಸಭೆಯ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿರುವ ಶೆಡ್ಗಳನ್ನೂ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಹಿಂದೂ ಸ್ಮಶಾನದ ಪಕ್ಕದಲ್ಲಿರುವ ಅನಧಿಕೃತ ಶೆಡ್ಗಳು, ಪ್ರಮುಖ ರಸ್ತೆಗಳ ಬದಿಯಲ್ಲಿರುವ ಅತಿಕ್ರಮಣಗಳು ಹಾಗೂ ಚರಂಡಿಗಳ ಮೇಲೆ ನಿರ್ಮಿಸಿರುವ ಕಂಪೌಂಡ್ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಪರ್ಯಾಯವಾಗಿ ನಗರದ ವಿವಿಧೆಡೆ ವೆಂಡಿಂಗ್ ಜೋನ್ಗಳನ್ನು ನಿರ್ಮಿಸಿ, ಅವರಿಗೆ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶವಿದೆ ಎಂದು ಪೌರಾಯುಕ್ತೆ ತಿಳಿಸಿದರು.
ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಸಂಬಂಧಪಟ್ಟವರಿಗೆ ಸ್ಥಳದ ಅಳತೆ ಹಾಗೂ ಅತಿಕ್ರಮಣದ ವಿವರಗಳನ್ನು ತಿಳಿಸಲಾಗುತ್ತಿದ್ದು, ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ತೆರವುಗೊಳಿಸದ ಸಂದರ್ಭಗಳಲ್ಲಿ ನಗರಸಭೆಯಿಂದ ಕಾನೂನುಬದ್ಧವಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ಹೇಳಿದರು.