ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ಹುನ್ನೂರಿನ ಗ್ರಾಮದೇವಿ ನಿತ್ಯ ಸತ್ಸಂಗ ಬಳಗದ ವತಿಯಿಂದ ರೂ.೨,೧೪,೮೦೦/- ದೇಣಿಗೆಯನ್ನು ಹರ್ಷಾನಂದ ಮಹಾಸ್ವಾಮಿಗಳಿಗೆ ಸಮರ್ಪಿಸಲಾಯಿತು.
ಗ್ರಾಮದೇವಿ ನಿತ್ಯ ಸತ್ಸಂಗ ಬಳಗದಿಂದ ಸುಮಾರು ೬೦ ವರ್ಷಗಳಿಂದ ಪ್ರತಿನಿತ್ಯ ಸಂಜೆ ಸತ್ಸಂಗ ಕಾರ್ಯಕ್ರಮ ಜರುಗಿಸುತ್ತ ಬರಲಾಗಿದೆ. ಅದರ ಅಂಗವಾಗಿ ಶುಕ್ರವಾರ ನಡೆದ ಸತ್ಸಂಗಕ್ಕೆ ಹರ್ಷಾನಂದ ಮಹಾಸ್ವಾಮಿಗಳನ್ನು ಆಹ್ವಾನಿಸಿ ದೇಣಿಗೆ ಹಣವನ್ನು ಸಮರ್ಪಿಸಿ ಅವರನ್ನು ಸನ್ಮಾನಿಸಲಾಗಿದೆ.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪದAತೆ ಅವರ ಗುರುಗಳಾದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಲ್ಲಿಕಾರ್ಜುನ ಶಿವಯೋಗಿಗಳು ಹುನ್ನೂರಿನಲ್ಲಿ ನಡೆಸಿದ್ದ ಪ್ರವಚನದ ಸವಿನೆನಪಿಗಾಗಿ ದೇಣಿಗೆ ನೀಡಲಾಗಿದೆ.
ಮೊದಲ ಬಾರಿಗೆ ೧೯೫೦ರಲ್ಲಿ, ಎರಡನೆ ಬಾರಿಗೆ ೧೯೫೩ರಲ್ಲಿ ತಲಾ ಮೂರು ತಿಂಗಳುಗಳ ಕಾಲ ಮಲ್ಲಿಕಾರ್ಜುನ ಶಿವಯೋಗಿಗಳು ಪ್ರವಚನ ನೀಡಿದ್ದರು. ನಂತರ ೧೯೬೯ರಲ್ಲಿ ಮೂರನೆ ಬಾರಿ ಒಂದು ತಿಂಗಳು ಪ್ರವಚನ ನೀಡಿದ್ದರು. ಮಲ್ಲಿಕಾರ್ಜುನ ಶಿವಯೋಗಿಗಳಿಂದ ದೀಕ್ಷೆಯನ್ನು ಹಲವರು ಪಡೆದಿದ್ದಾರೆ.
ಸಿದ್ಧೇಶ್ವರ ಮಹಾಸ್ವಾಮಿಗಳು ಕೂಡ ೧೯೯೦ರಲ್ಲಿ ಹುನ್ನೂರಿನಲ್ಲಿ ಒಂದು ತಿಂಗಳು ಕಾಲ ಪ್ರವಚನ ನೀಡಿದ್ದರು. ಅಲ್ಲದೆ ಹುನ್ನೂರಿನಲ್ಲಿ ಯಾವುದೆ ಸಾರ್ವಜನಿಕ ಕಾರ್ಯಕ್ರಮಗಳು ಜರುಗುತ್ತಿದ್ದರೂ ಸಹ ಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಿದ್ಧೇಶ್ವರ ಶ್ರೀಗಳ ಸಂಕಲ್ಪ ಪೂರೈಕೆಗೆ ಅಳಿಲು ಸೇವೆ ಸಲ್ಲಿಸುವ ದೃಷ್ಟಿಯಿಂದ ಸತ್ಸಂಗ ಬಳಗದ ಮಹಿಳೆಯರು ಸೇರಿದಂತೆ ಸರ್ವರೂ ಸೇರಿ ಕೈಲಾದ ವಂತಿಗೆ ಸಂಗ್ರಹಿಸಿ ಹರ್ಷಾನಂದ ಶ್ರೀಗಳಿಗೆ ಸಮರ್ಪಿಸಿದ್ದಾರೆ.
ಶಿವಪುತ್ರ ಸ್ವಾಮಿಗಳು, ದಯಾನಂದ ಕೊಣ್ಣೂರ, ಚನ್ನಪ್ಪ ಬಿರಾದಾರ, ಶೇಖರ ಸಾವಳಗಿ, ನರಸಪ್ಪ ತೇಲಿ, ಬಸವಂತಪ್ಪ ಹನಗಂಡಿ, ಸಂಗಣ್ಣ ಕಡಪಟ್ಟಿ, ಗುರಪ್ಪ ಕಲಾಜಗೋಳ, ಶಿವಪ್ಪ ಕಡಪಟ್ಟಿ, ಮಲ್ಲಪ್ಪ ಯಲಗುದ್ರಿ, ಅಂಬಿ ಸರ್ ಇತರ ಹಿರಿಯರು ಇದ್ದರು.
