ಅಥಣಿ: ಪ್ರತಿವರ್ಷದಂತೆ ಈ ವರ್ಷವೂ ನಾಗರ ಪಂಚಮಿ ಹಬ್ಬದ ದಿನದಿಂದಲೇ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ಶೇರು ಸದಸ್ಯರಿಗೆ ಹಾಗೂ ಕಬ್ಬು ಪೂರೈಕೆದಾರರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುತ್ತಿದ್ದು, ಶೇರು ಸದಸ್ಯರು ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರು ಕಟ್ಟಿ ಬೆಳೆಸಿದ ಕಾರ್ಖಾನೆಯಾಗಿದ್ದು, ಅಥಣಿ ಮತಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾಗಿರುವ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಸಹಕಾರಿ ತತ್ವದ ಅಡಿ ಈ ಕಾರ್ಖಾನೆಯ ಪ್ರಗತಿಗಾಗಿ ಮತ್ತು ತಾಲೂಕಿನ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸನ್ 2025-26 ನೇ ಸಾಲಿಗೆ ಪ್ರತಿ ಶೇರಿಗೆ 50 ಕೆ.ಜಿ.ಯಂತೆ ಹಾಗೂ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. ದಂತೆ ಸದಸ್ಯರ ಹಾಗೂ ಕಬ್ಬು ಪೂರೈಕೆದಾರರು ಸಕ್ಕರೆಯನ್ನು ಆಗಸ್ಟ್ 17 ರಿಂದ ಸೆಪ್ಟೆಂಬರ್ 15 ರವರೆಗೆ ಪ್ರತಿ ಕಿಲೋಗೆ ದರ 25 ರೂ ದರದಂತೆ ವಿತರಿಸಲಾಗುವುದು ಹಾಗೂ ಈ ಅವಧಿಯಲ್ಲಿ ಸಕ್ಕರೆ ಪಡೆಯದೇ ಇದ್ದವರು ಪ್ರತಿ ಕಿಲೋಕ್ಕೆ 27ರೂ ದರದಂತೆ ಸೆಪ್ಟೆಂಬರ್ 16 ರಿಂದ 30 ರವರೆಗೆ ಮಾತ್ರ (ರಜೆ ದಿನಗಳನ್ನು ಹೊರತುಪಡಿಸಿ) ವಿತರಿಸಲಾಗುವುದು. ಸಕ್ಕರೆಯನ್ನು ಕಾರಖಾನೆಯ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿತರಿಸಲಾಗುವುದು. ಈ ಅವಧಿ ಮುಗಿದ ನಂತರ ಬಂದವರಿಗೆ ಸಕ್ಕರೆಯನ್ನು ವಿತರಿಸಲಾಗುವುದಿಲ್ಲ. ಆದ್ದರಿಂದ ಶೇರು ಸದಸ್ಯರು ಹಾಗೂ ಕಬ್ಬು ಪೂರೈಕೆದಾರರು ನಿಗದಿತ ಅವಧಿಯಲ್ಲಿ ಸಕ್ಕರೆ ಪಡೆದುಕೊಂಡು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಬಾರಿ ಸಕ್ಕರೆಯ ಕಾರ್ಡುಗಳನ್ನು ನವೀಕರಿಸಲಾಗಿದ್ದು, ಈಗಾಗಲೇ ಕಾರ್ಖಾನೆಯ ಸಿಬ್ಬಂದಿಯವರು ಕಬ್ಬು ಪೂರೈಸಿದ ರೈತರಿಗೆ ಮತ್ತು ಶೇರು ಸದಸ್ಯರಿಗೆ ಸಕ್ಕರೆ ಕಾರ್ಡನ್ನು ತಲುಪಿಸಿದ್ದಾರೆ. ಒಂದು ವೇಳೆ ಯಾರಿಗಾದರೂ ಕಾಡುಗಳು ತಲುಪದೇ ಇದ್ದಲ್ಲಿ ಕಳೆದುಕೊಂಡಿದ್ದಲ್ಲಿ ಕಾರ್ಖಾನೆಯ ಕಾರ್ಯಾಲಯದಲ್ಲಿ ಸಂಪರ್ಕಿಸಬೇಕು ಎಂದು ಕಛೇರಿ ಅಧೀಕ್ಷಕ ಸುರೇಶ ಠಕ್ಕಣ್ಣವರ ತಿಳಿಸಿದ್ದಾರೆ.