, ಜಮಖಂಡಿ,02 : ತಾಲುಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ನಗರದ ಬಸವ ಭವನದಲ್ಲಿ ಸೆ.27 ರಂದು ಕಾರ್ಯಕ್ರಮದ ಆಯೋಜಿಸಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು, ಗೃಹ ಕಚೇರಿ ಸಾಕ್ಷಾತ್ಕಾರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮೀರಿದ ಶ್ರೀಮಂತ ಇತಿಹಾಸವಿದೆ. ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ನಗರದಲ್ಲಿ ಒಂಬತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, 10ನೇ ಸಮ್ಮೇಳನವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ರಾಜ್ಯಮಟ್ಟದ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ವಿವಿಧ ಸಾಹಿತ್ಯ ಗೋಷ್ಠಿ ಹಾಗೂ ಸಂವಾದಗಳನ್ನು ನಡೆಸಲಾಗುವುದು. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಮತ್ತು ತಲ್ಲಣಗಳ ಕುರಿತು ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. ಕನ್ನಡ ಸಾಹಿತ್ಯ ಪರಿಷತ ತಾಲುಕು ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ನಗರದಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಮ್ಮೇಳನದ ಸ್ಮರಣಾರ್ಥ ಸ್ಮರಣ ಸಂಚಿಕೆ ಪ್ರಕಟಿಸುವುದರ ಜೊತೆಗೆ, ಈವರೆಗೆ ನಡೆದ 10 ಸಮ್ಮೇಳನಗಳ ಸರ್ವಾಧ್ಯಕ್ಷರ ಭಾಷಣಗಳನ್ನು ಒಟ್ಟುಗೂಡಿಸಿ ‘ಜಮಖಂಡಿ ಸಿರಿ’ ಎಂಬ ಆಕರ ಗ್ರಂಥವನ್ನು ಹೊರತರಲಾಗುವುದು ಎಂದು ತಿಳಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳು ಹಾಗೂ ಕನ್ನಡ ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಸಮ್ಮೇಳನದಲ್ಲಿ ಗೌರವಿಸಲಾಗುವುದು. ಗಜಾರೋಹಣ, ಸರ್ವಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಸಾಹಿತ್ಯ ಗೋಷ್ಠಿಗಳು, ಸಂವಾದ, ಸಮಾರೋಪ ಸಮಾರಂಭ, ಪುಸ್ತಕ ಮಳಿಗೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಾಧ್ಯಕ್ಷ, ಕೋಶಾಧ್ಯಕ್ಷರ ಆಯ್ಕೆ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಪಾಟೀಲ ಹಾಗೂ ಕೋಶಾಧ್ಯಕ್ಷರಾಗಿ ಭಕ್ತ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಧನುದೇವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಿ ಪ್ರಕಟಿಸಲಾಗುವುದು. 2026ರ ಸೆ.27ರಂದು ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಬಸವ ಭವನದಲ್ಲಿ ಸಮ್ಮೇಳನ ನಡೆಯಲಿದ್ದು, ಕನ್ನಡಾಭಿಮಾನಿಗಳು, ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಎಂ ಬಿ, ಇಂಡಿ, ಶಿವಾನಂದ ಪಾಟೀಲ,ನಾಗಪ್ಪ ಸನದಿ,ಶಾರದಾ ಮುಳ್ಳೂರ, ಡಾ.ಟಿ.ಪಿ.ಗಿರಡ್ಡಿ ಬಸವರಾಜ ಕಡ್ಡಿ,ಸಂಗಮೇಶ್ ಮಟೊಳಿ, ಶಿವಾನಂದ ಜಡಿಮಠ, ಬಾಹುಬಲಿ ಬಿರಾದಾರ, ಬಿ.ಎನ್.ಅಸ್ಕಿ ಉಮೇಶ ಸಿದ್ಧರೆಡ್ಡಿ ಮುಂತಾದವರಿದ್ದರು.