ಹಸಿರು ಕ್ರಾಂತಿ ವರದಿ ತುಮಕೂರು
ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರ ಕಡಿಮೆ ಮಾಡಲು ಕಂಪನಿಗಳು ವಿದ್ಯಾರ್ಥಿಗಳಿಗೆ ಅಗತ್ಯ ಜ್ಞಾನದೊಂದಿಗೆ ತರಬೇತಿ ಹಾಗೂ ಅವಕಾಶಗಳನ್ನು ಒದಗಿಸಬೇಕು ಎಂದು ಡಿಸಿಎಂ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ ಸಲಹೆ ನೀಡಿದರು.
ನಗರದ ಹೊರವಲಯದ ಕ್ಯಾತಸಂದ್ರ ಟೋಲ್ಗೇಟ್ ಸಮೀಪದ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಹೊಸ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (ಎಐ) ಕುರಿತು ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವುದರೊಂದಿಗೆ ಉದ್ಯಮದ ಅಗತ್ಯಕ್ಕೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಾಪಕರು ಪಠ್ಯಪುಸ್ತಕಗಳ ಜತೆಗೆ ಸಂಶೋಧನಾ ಪತ್ರಿಕೆಗಳು ಹಾಗೂ ಹೊಸ ತಂತ್ರಜ್ಞಾನಗಳ ಮೂಲಕ ತಮ್ಮ ಜ್ಞಾನವನ್ನು ನಿರಂತರವಾಗಿ ಉನ್ನತೀಕರಿಸಿಕೊಂಡು, ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಪಡಿಸಬೇಕು ಎಂದು ಕರೆ ನೀಡಿದರು.
ಜಿಸಿಸಿ ಕೈಂಡ್ರಿಲ್ ಉದ್ಯಮದ ಉಪಾಧ್ಯಕ್ಷ ಪ್ರಶೋಭ್ ಚಂದ್ರಕಾಂತ ಮಾತನಾಡಿ, ಎಐ ಬೆಳವಣಿಗೆಯಿಂದ ಉದ್ಯೋಗಗಳ ಸ್ವರೂಪ ಬದಲಾಗಬಹುದೇ ಹೊರತು ಉದ್ಯೋಗಾವಕಾಶಗಳು ಸಂಪೂರ್ಣವಾಗಿ ಕಣ್ಮರೆಯಾಗುವುದಿಲ್ಲ. ತಾಂತ್ರಿಕ ಜ್ಞಾನದ ಜೊತೆ ಜೊತೆಗೆ ಕಥೆ ನಿರೂಪಣೆ, ಕುತೂಹಲ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸಹಾನುಭೂತಿ ಹಾಗೂ ಧೈರ್ಯದಂತಹ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಐಬಿಎಂನ ಮಾಜಿ ಉಪಾಧ್ಯಕ್ಷ ಸತ್ಯೇನ್ ಪಾರಿಖ್ ಮಾತನಾಡಿ, ಎಐ, ರೊಬೋಟಿಕ್ಸ್ ಮತ್ತು ಯಾಂತ್ರಿಕೃತ ತಂತ್ರಜ್ಞಾನಗಳೊಂದಿಗೆ ಹೊಂದಿಕೊಳ್ಳಲು ನಿರಂತರ ಕಲಿಕೆ ಅಗತ್ಯವಿದೆ. ಸಂವಹನ ಕೌಶಲ್ಯ, ತಾಂತ್ರಿಕ ಜ್ಞಾನ, ತಂಡದ ಕೆಲಸ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ.ಅಶೋಕ್ ಮೆಹ್ತಾ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಎಸ್ಎಸ್ಐಟಿ ಪ್ರಾಂಶುಪಾಲರಾದ ಡಾ.ಎಂ.ಎಂ.ನಡುಕಟ್ಟಿ ಸೇರಿದಂತೆ ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ಅಧಿಕಾರಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ ಸಾಲಿನಲ್ಲಿ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ನ್ನು ಬೆಳೆಸುವ ಗುರಿಯೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು.
-ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿಗಳು.