ಅಥಣಿ: ತಾಲೂಕಿನ ಶಿವಯೋಗಿಗಳ ಕ್ಷೇತ್ರವಾದ ಅಥಣಿಯಲ್ಲಿ ಸರ್ವ ಧರ್ಮೀಯರೂ ಸದಾ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು, ಈ ಬಾರಿಯ ಮೊಹರಂ ಹಬ್ಬವನ್ನು ಪರಸ್ಪರ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಅಥಣಿ ಪೊಲೀಸ್ ಉಪನಿರೀಕ್ಷಕ ಗಿರಮಲಪ್ಪ ಉಪ್ಪಾರ ಮನವಿ ಮಾಡಿದರು.
ಅಥಣಿ ಪೊಲೀಸ್ ನಿರೀಕ್ಷಣಾ ಮಂದಿರದಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕರಿಸಬೇಕು. ಒಂದು ವೇಳೆ ಹಬ್ಬದ ಹೆಸರಿನಲ್ಲಿ ಶಾಂತಿ ಭಂಗ ಉಂಟುಮಾಡುವ ಅಥವಾ ಅಹಿತಕರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಯ್ಯದ ಅಮೀನ ಗದ್ಯಾಳ, ಅಸ್ಲಮ ನಾಲಬಂದ, ಶಶಿ ಸಾಳವೆ,ಶೇಖರ್ ಸೌದಾಗರ, ಅಯಾಜ ಮಾಸ್ಟರ್,ಶಬ್ಬೀರ ಸಾತಬಚ್ಚೆ,ಶಿವಾನಂದ ಸೌದಾಗರ, ಇಲಿಯಾಸ್ ಹಿಪ್ಪರಗಿ, ಜುಬೇರ್ ನಾಲ್ಬಂದ್, ಮಂಜು ಹೋಳಿಕಟ್ಟಿ, ಆಶಿಫ ತಾಂಬೊಳಿ,ಮಹೇಂದ್ರ ರಾಜಂಗಳೆ,ರಸುಲಸಾಬ ನದಾಫ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮತ್ತು ಗಣ್ಯರು ಭಾಗವಹಿಸಿ, ಹಬ್ಬವನ್ನು ಶಾಂತಿಯುತವಾಗಿ ನಡೆಸಿಕೊಡುವ ಭರವಸೆ ನೀಡಿದರು.
