ಬೀಳಗಿ- ರಾಷ್ಟ್ರಭಕ್ತಿಯ ಪ್ರತೀಕವಾದ ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ,ಭಾರತೀಯ ಜನತಾ ಪಕ್ಷದ ಬೀಳಗಿ ಮಂಡಲ ವತಿಯಿಂದ ಮುಖಂಡರು ಪಕ್ಷದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಗೀತೆಯ ಪೂರ್ಣರೂಪವನ್ನು ಗೌರವಪೂರ್ವಕವಾಗಿ ಪಾಲಿಸುವಂತೆ ಮನವಿಯಲ್ಲಿ ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವ್ರತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಾದಯಾತ್ರೆಯ ಮೂಲಕ ಮುಖ್ಯರಸ್ತೆ ಯ ಮುಖಾಂತರ ಸಂಚರಿಸಿ ತಹಸೀಲ್ದಾರ್ ಕಾರ್ಯಾಲಯದ ಆವರಣ ತಲುಪಿ ಕೆಲ ಕಾಲ ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ತೀರ್ಮಾನ ಖಂಡನೀಯ. ವಂದೇ ಮಾತರಂನ ೧೫೦ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಂಡಿರುವ ಈ ತೀರ್ಮಾನವನ್ನು ಭಾರತೀಯ ಜನತಾ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ನಿರ್ಧಾರ ದುರದೃಷ್ಟಕರವಾಗಿದ್ದು, ಇದು ವಂದೇ ಮಾತರಂ ಗೀತೆಗೆ ಮಾತ್ರವಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅವಮಾನವಾಗಿದೆ ಎಂದರು.
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಿದ್ದುಪಡಿ ತಡೆಗಟ್ಟುವಿಕೆ (ತಿದ್ದುಪಡಿ) ಕಾಯ್ದೆ ೨೦೨೬ ಅನ್ನು ಅನುಮೋದಿಸಿ, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಸಂವಿಧಾನತ್ಮಕವಾಗಿ ಕಡ್ಡಾಯಗೊಳಿಸಿದೆ. ಈ ಕಾನೂನಿನ ಮೂಲಕ ರಾಷ್ಟ್ರಗೀತೆಗೆ ಇರುವ ಸಮಾನ ಗೌರವ ಮತ್ತು ಸ್ಥಾನವನ್ನು ನೀಡಲಾಗಿದೆ. ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ ಅದು ಭಾರತದ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಪ್ರತೀಕ. ಅಂತಹ ಐತಿಹಾಸಿಕ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವುದು, ಅದರ ಪರಂಪರೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದ ಅವರು ತುಷ್ಟೀಕರಣ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ವಂದೇ ಮಾತರಂ ಅನ್ನು ಕೇವಲ ಎರಡು ಸಾಲುಗಳಿಗೆ ಸಿಮಿತಗೊಳ್ಳಿಸಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರು.
ಬಿಜೆಪಿ ಬೀಳಗಿ ಮಂಡಲ ಅಧ್ಯಕ್ಷ ಹೊಳಬಸು ಬಾಳಶೆಟ್ಟಿ ಮಾತನಾಡಿ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಸಂಕೇತವಾದ ವಂದೇ ಮಾತರಂಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಮಾನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಭಂಗ ಉಂಟಾದರೆ, ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ. ವಂದೇ ಮಾತರಂಗೆ ಕತ್ತರಿ ಹಾಕುವ ಓಲೈಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ತುಷ್ಟೀಕರಣ ರಾಜಕಾರಣವನ್ನು ತಕ್ಷಣ ಕೈಬಿಟ್ಟು, ವಂದೇ ಮಾತರಂನ ಆರು ಚರಣಗಳನ್ನು ಹಾಡುವಂತೆ ಕೂಡಲೇ ಮರುಸುತ್ತೋಲೆ ಹೊರಡಿಸಬೇಕು. ಇಲ್ಲವಾದರೆ, ಈ ನಿರ್ಧಾರದ ವಿರುದ್ಧ ರಾಜ್ಯದ ಜನರ ಆಕ್ರೋಶವನ್ನು ಸರ್ಕಾರ ಎದುರಿಸಬೇಕಾಗುತ್ತದೆ.
ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಬದಲಾಯಿಸಲು ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ, ಸಿದ್ದಪ್ಪ ಕಡಪಟ್ಟಿ,ಅಕ್ಷಯ ನಾಯ್ಕರ,ಮುತ್ತು ಬೋಜಿ೯, ಬಸವರಾಜ ಉಮಚಗಿಮಠ, ರಾಮಣ್ಣ ಕಾಳಪ್ಪಗೋಳ,ಶಂಕರ್ ಬಡಿಗೇರ,ಸಲಬಣ್ಣ ಡಂಗಿ,ಸಿದ್ದು ಕೆಂಚನ್ನವರ,ಸಿದ್ದು ಪಾತ್ರೋಟ್,ಸತೀಶ್ ಹಿರೇಮಠ,ಸೇರಿದಂತೆ ಇತರರು ಇದ್ದರು.