ಜಮಖಂಡಿ, ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನೋತ್ಸವ ಸೋಮವಾರ ಸಂಪನ್ನಗೊಂಡಿತು, ತಾಲುಕಿನಾದ್ಯಂತ ವೈಭವ ದಿಂದ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದ್ದರು, ನಗರದ ಹುಲ್ಯಾಳಕರಗಲ್ಲಿ, ಸಾಬಡೆಗಲ್ಲಿ, ಪ್ರಭಾತನಗರ ಹಾಗೂ ಪೋಸ್ಟ ಕಾಲನಿಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿದಿನ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪಲ್ಲಕ್ಕಿ ಸೇವೆ, ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು. ಪಂಡಿತರಿಂದ ಉಪನ್ಯಾಸ, ಹೋಮ - ಹವನಗಳನ್ನು ಆಯೋಜಿಸಲಾಗಿತ್ತು. ಮೂರನೇ ದಿನವಾದ ಸೋಮವಾರ ರಥೋತ್ಸವ ಆಯೋಜಿಲಾಗಿತ್ತು, ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು, ತಳಿರು, ತೋರಣ, ಪುಷ್ಪಹಾರಗಳಿಂದ ಸಾಲಂಕೃತ ರಥೋತ್ಸವ ಕಣ್ಮನ ಸೆಳೆಯಿತು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು, ಎಲ್ಲ ಮಠಗಳಲ್ಲಿ ತೀರ್ಥ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು, ಪ್ರಧಾನ ಅರ್ಚಕರಾದ ರಾಘವೇಂದ್ರ ಜೋಷಿ, ಪೂರ್ಣಪ್ರಜ್ಞ ಜೋಷಿ ಹಾಗೂ ಸಾಬಡೆ ಗಲ್ಲಿ ಮಠದ ರಘೋತ್ತಮಾಚಾರ್ಯ, ಅಶೋಕಾಚಾರ್ಯ, ಪೋಸ್ಟ ಕಾಲೊನಿ ಮಠದ ಗೋವಿಂದಾಚಾರ್ಯ, ಹಿರೇಪಡಸಲಗಿಯ ಮಧ್ವಾಚಾರ್ಯ ಕಟ್ಟಿ ಮುಂತಾದವರು ಉತ್ಸವದ ನೇತೃತ್ವ ವಹಿಸಿದ್ದರು.