ಅಥಣಿ : ಅಭಿನವ ಮಂತ್ರಾಲಯ ಎಂದು ಕರೆಯಲ್ಪಡುವ ಅಥಣಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 35ನೇ ಆರಾಧನಾ ಮಹೋತ್ಸವ ದಿ. 29 ರಿಂದ 31 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ಉತ್ಸವದಲ್ಲಿ ಪ್ರತಿದಿನ ಮುಂಜಾನೆ 4 ಗಂಟೆಯಿಂದ 8 ಗಂಟೆಯವರೆಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ, ಅಭಿಷೇಕ ಮತ್ತು ವಿಶೇಷ ಪೂಜೆ ಜರುಗಲಿದೆ. 9 ರಿಂದ 12 ಗಂಟೆಯವರೆಗೆ ಪುರಾಣ ಹಾಗೂ ರಾಯರ ಸ್ತೋತ್ರ ಪಾರಾಯಣ ಜರುಗುವುದು. 12 ಗಂಟೆಯಿಂದ 3 ಗಂಟೆವರೆಗೆ ಪ್ರಸಾದ ವಿತರಣೆ, ಸಾಯಂಕಾಲ 5 ರಿಂದ 7 ಗಂಟೆವರೆಗೆ ಭಜನೆ, ಪಲ್ಲಕ್ಕಿ ಸೇವೆ, ಮಂತ್ರ ಪುಷ್ಪ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ.
ದಿ. 29ರಂದು ಸಾಯಂಕಾಲ 6 ಗಂಟೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಣೆ ಹಾಗೂ ಧಾರವಾಡದ ಉದಯ್ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ದಿ. 30 ರಂದು ಸಾಯಂಕಾಲ 6 ಗಂಟೆಗೆ ನ್ಯಾಯವಾದಿ ಕೆ. ಎಲ್ ಕುಂದರಗಿ ವಿರಚಿತ ಶ್ರೀ ರಾಘವೇಂದ್ರ ವಿಜಯ ಭಕ್ತಿಪರ ನಾಟಕ ಪ್ರದರ್ಶನವಾಗಲಿದೆ.
ದಿ. 31 ರಂದು ಮುಂಜಾನೆ 11:00ಗೆ ಪವಮಾನ ಹೋಮ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ರಥೋತ್ಸವ ಜರುಗಲಿದೆ. ಸಾಯಂಕಾಲ 6 ಗಂಟೆಗೆ ಬೆಂಗಳೂರಿನ ವಿದುಷಿ ದಿವ್ಯಾ ಗಿರಿಧರ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗುವುದು. ಅಥಣಿ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಈ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಆರಾಧನಾ ಉತ್ಸವ ಕಮಿಟಿಯ ಅಧ್ಯಕ್ಷ ಶ್ರೀನಿವಾಸಾಚಾರ್ಯ ಜೋಶಿ, ಕಾರ್ಯದರ್ಶಿ ಎಂ ಬಿ ಹೂಗಾರ ಪ್ರಕಟಣೆಗೆ ತಿಳಿಸಿದ್ದಾರೆ.