ಬೆಳಗಾವಿ.ದೈವಜ್ಞ ಜ್ಯುವೆಲ್ಲರಿ ಅಸೋಸಿಯೇಶನ್ (DJA), ಬೆಳಗಾವಿಯ ಅಧ್ಯಕ್ಷರಾದ ಮಣಿಕ ಅನ್ವೇಕರ ಹಾಗೂ ಕಾರ್ಯದರ್ಶಿಯಾದ ವೈಭವ ವರ್ಣೇಕರ ಅವರ ನೇತೃತ್ವದ ನಿಯೋಗವು ಜೂನ್ 9 ಬೆಳಗಾವಿಯ ಗೌರವಾನ್ವಿತ ಜಿಲ್ಲಾಧಿಕಾರಿಗಳನ್ನು ಅವರ ಕಚೇರಿಯಲ್ಲಿ ಸೌಜನ್ಯ ಹಾಗೂ ಕೃತಜ್ಞತಾ ಭೇಟಿಯನ್ನು ನೀಡಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಾಮಾಣಿಕ ಆಭರಣ ವ್ಯಾಪಾರಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳವರು ಹೊರಡಿಸಿದ ಜಿಲ್ಲಾ ಜಾಗೃತಿ ಸಮಿತಿ (District Vigilance Committee) ರಚನೆಯ ಐತಿಹಾಸಿಕ ಆದೇಶಕ್ಕಾಗಿ ನಿಯೋಗವು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿತು. ಹಳೆಯ ಚಿನ್ನ, ಬೆಳ್ಳಿ ಹಾಗೂ ಬಳಸಿದ ಆಭರಣಗಳ ಖರೀದಿ ಸಂಬಂಧಿತ ವಿಷಯಗಳಲ್ಲಿ ಪಾರದರ್ಶಕತೆ, ಕಾನೂನುಬದ್ಧತೆ ಹಾಗೂ ಪೊಲೀಸ್ ಇಲಾಖೆ ಮತ್ತು ಆಭರಣ ವ್ಯಾಪಾರಿಗಳ ನಡುವೆ ಸಮನ್ವಯವನ್ನು ಬೆಳೆಸುವ ಮಹತ್ವದ ಕ್ರಮವೆಂದು ಸಂಘವು ಅಭಿಪ್ರಾಯಪಟ್ಟಿತು.
ಈ ಆದೇಶವು ಜಿಲ್ಲೆಯ ಆಭರಣ ವ್ಯಾಪಾರಿಗಳಿಗೆ ಮಹತ್ತರ ರಕ್ಷಣೆಯನ್ನು ಒದಗಿಸುವುದರ ಜೊತೆಗೆ ಜಿಲ್ಲಾಡಳಿತ ಕೈಗೊಂಡಿರುವ ಮಾದರಿ ಹಾಗೂ ದೂರದೃಷ್ಟಿಯ ನಿರ್ಧಾರವಾಗಿದೆ ಎಂದು ಸಂಘವು ತಿಳಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ವಿವಿಧ ಕಲ್ಯಾಣ ಯೋಜನೆಗಳಡಿ ಜಿಲ್ಲೆಯ ಚಿನ್ನದ ಕಾರಿಗರರಿಗೆ 1,000 ಕ್ಕೂ ಹೆಚ್ಚು ಕಾರ್ಮಿಕ ಗುರುತಿನ ಚೀಟಿಗಳನ್ನು (Labour Identity Cards) ದೊರಕಿಸಲು ಸಂಘವು ವಹಿಸಿದ ಪಾತ್ರವನ್ನು ಜಿಲ್ಲಾಧಿಕಾರಿಗಳಿಗೆ ವಿವರಿಸಲಾಯಿತು.
ಸಂಘದ ವತಿಯಿಂದ ಆಹ್ವಾನಿಸಲಾದ ಕೆಲವು ಫಲಾನುಭವಿಗಳಿಗೆ ಗೌರವಾನ್ವಿತ ಜಿಲ್ಲಾಧಿಕಾರಿಗಳ ಕರಕಮಲಗಳಿಂದ ಕಾರ್ಮಿಕ ಗುರುತಿನ ಚೀಟಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಈ ಕಾರ್ಯಕ್ಕಾಗಿ ಜಿಲ್ಲಾಧಿಕಾರಿಗಳು ದೈವಜ್ಞ ಜ್ಯುವೆಲ್ಲರಿ ಅಸೋಸಿಯೇಶನ್ನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ, ಚಿನ್ನದ ಕಾರಿಗರರು ಹಾಗೂ ಆಭರಣ ಸಮುದಾಯದ ಕಲ್ಯಾಣಕ್ಕಾಗಿ ಸಂಘ ಸಲ್ಲಿಸುತ್ತಿರುವ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಚಿನ್ನದ ಕಾರಿಗರರು ಹಾಗೂ ಆಭರಣ ವ್ಯಾಪಾರಿಗಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಕರ್ನಾಟಕ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವುದು ಹಾಗೂ ಇತ್ತೀಚೆಗೆ ರಚನೆಯಾದ ಜಿಲ್ಲಾ ಜಾಗೃತಿ ಸಮಿತಿಯ ಉದ್ದೇಶ, ಅಧಿಕಾರ, ಜವಾಬ್ದಾರಿಗಳು ಹಾಗೂ ವ್ಯಾಪಾರಿಗಳು ಪಾಲಿಸಬೇಕಾದ ಕಾನೂನುಬದ್ಧ ಕ್ರಮಗಳ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಹಳೆಯ ಚಿನ್ನ ಮತ್ತು ಬೆಳ್ಳಿ ಆಭರಣಗಳ ಖರೀದಿಯ ವೇಳೆ ಅನುಸರಿಸಬೇಕಾದ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ವ್ಯಾಪಾರಿಗಳಿಗೆ ಅರಿವು ಮೂಡಿಸುವ ಮೂಲಕ ಕಳ್ಳತನದ ವಸ್ತುಗಳ ವ್ಯವಹಾರದಿಂದ ದೂರವಿರಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಟ್ಟದಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸಂಘಕ್ಕೆ ಮನವಿ ಮಾಡಿದರು. ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಆಯೋಜಿಸುವ ಭರವಸೆಯನ್ನು ನೀಡಿದರು.
ಸಭೆಯು ಅತ್ಯಂತ ಸೌಹಾರ್ದಯುತ ಹಾಗೂ ಫಲಪ್ರದ ವಾತಾವರಣದಲ್ಲಿ ನಡೆಯಿತು. ಜಿಲ್ಲೆಯ ಆಭರಣ ವ್ಯಾಪಾರಿಗಳು ಹಾಗೂ ಚಿನ್ನದ ಕಾರಿಗರರ ಹಿತಾಸಕ್ತಿಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಜಿಲ್ಲಾಡಳಿತ ಹಾಗೂ ದೈವಜ್ಞ ಜ್ಯುವೆಲ್ಲರಿ ಅಸೋಸಿಯೇಶನ್ ಒಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.
