ಅಥಣಿ: ಬಡವರಿಗೆ, ನಿರ್ಗತಿಕರಿಗೆ ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಆರ್ ಎಸ್ ಪಿ ಫೌಂಡೇಶನ್ ವತಿಯಿಂದ ಆರಂಭಿಸಲಾದ ಉಚಿತ ಅನ್ನದಾಸೋಹ ಹಾಗೂ ಉಚಿತ ಆಂಬ್ಯುಲೆನ್ಸ್ ಸೇವೆ ಮೂರು ವರ್ಷ ಪೂರೈಸಿರುವುದು ಸಂತಸ ತಂದಿದೆ ಎಂದು ಫೌಂಡೇಶನ್ ಅಧ್ಯಕ್ಷ ರವಿ ಪೂಜಾರಿ ಹೇಳಿದರು.
ಅಥಣಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ 2023ರ ಸೆಪ್ಟೆಂಬರ್ 8 ಮತ್ತು 9 ರಂದು ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಹಲವು ಟೀಕೆ, ಟಿಪ್ಪಣಿಗಳನ್ನು ಎದುರಿಸಬೇಕಾಯಿತು. ಆದರೆ ಗುರುಹಿರಿಯರ, ಸಹೋದ್ಯೋಗಿಗಳ ಹಾಗೂ ಸ್ನೇಹಿತರ ಆಶೀರ್ವಾದ ಮತ್ತು ಸಹಕಾರದಿಂದ ಮೂರು ವರ್ಷಗಳ ಕಾಲ ನಿರಂತರವಾಗಿ ಸೇವೆ ಮುಂದುವರಿಸಲು ಸಾಧ್ಯವಾಗಿದೆ ಎಂದರು.
“ಈ ಸೇವೆಯನ್ನು ಯಾವುದೇ ಸ್ವಾರ್ಥ ಅಥವಾ ತೋರಿಕೆಗಾಗಿ ಮಾಡುತ್ತಿಲ್ಲ. ಆತ್ಮತೃಪ್ತಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ತಾಲೂಕಿನ ಜನರು ಇದೇ ರೀತಿಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರವನ್ನು ಮುಂದುವರಿಸಬೇಕು. ಮುಂದೆಯೂ ಯಾವುದೇ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮುಂದುವರಿಸುತ್ತೇನೆ” ಎಂದು ರವಿ ಪೂಜಾರಿ ಹೇಳಿದರು.
ರವಿ ಪೂಜಾರಿ ಅವರ ಮೂರು ವರ್ಷದ ಸೇವೆಯನ್ನು ಶ್ಲಾಘಿಸಿದ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾವಸಾಬ್ ಐಹೊಳೆ ಮಾತನಾಡಿ ಅಥಣಿ ತಾಲೂಕಿನಲ್ಲಿ ಸಾಕಷ್ಟು ಶ್ರೀಮಂತರು ಹಾಗೂ ಆಸ್ತಿವಂತರಿದ್ದರೂ ಹಸಿದವರಿಗೆ, ಬಡವರಿಗೆ ಮತ್ತು ನಿರ್ಗತಿಕರಿಗೆ ಉಚಿತ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಎಂದ ಅವರು
ರವಿ ಪೂಜಾರಿ ಅವರು ಅನ್ನದಾಸೋಹದ ಜೊತೆಗೆ ಉಚಿತ ಆಂಬ್ಯುಲೆನ್ಸ್ ಸೇವೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ದೀನದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಸಹಾಯ, ಶಾಲಾ-ಕಾಲೇಜುಗಳಿಗೆ ದೇಣಿಗೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಆನಂತರ ಹಿರಿಯ ಸಾಹಿತಿ ಅಪ್ಪಾಸಾಬ ಅಲಿಬಾದಿ ಮಾತನಾಡಿ, ಒಂದು ದಿನ ಅಥವಾ ಕೆಲ ದಿನ ಅನ್ನದಾಸೋಹ ಮಾಡುವುದು ಸಾಧ್ಯ. ಆದರೆ ವರ್ಷಾನುಗಟ್ಟಲೆ ನಿರಂತರವಾಗಿ ಅನ್ನದಾಸೋಹ ನಡೆಸುತ್ತಿರುವುದು ಹೆಮ್ಮೆ ಹಾಗೂ ಗೌರವದ ಸಂಗತಿ. ರವಿ ಪೂಜಾರಿ ಅವರು ಕೆಲವೇ ವರ್ಷಗಳಲ್ಲಿ ಅಥಣಿಯಲ್ಲಿ ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದು, ಹಲವು ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು
ರವಿ ಪೂಜಾರಿ ಅವರ ಸಮಾಜ ಸೇವೆಗೆ ಇನ್ನಷ್ಟು ಶಕ್ತಿ ಹಾಗೂ ಸಾಮರ್ಥ್ಯವನ್ನು ಸಿದ್ದೇಶ್ವರರು ಮತ್ತು ಬಸವಾದಿ ಪ್ರಮಥರು ಕರುಣಿಸಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಭು ಚವ್ಹಾಣ, ಸಿದ್ದು ಪಾಟೀಲ, ಚಿದಾನಂದ ಶೇಗುಣಸಿ, ಗುರು ಆಜೂರ ಸೇರಿದಂತೆ ಆರ್ ಎಸ್ ಪಿ ಫೌಂಡೇಶನ್ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗದವರು ಉಪಸ್ಥಿತರಿದ್ದರು.